ಬೆಂಗಳೂರು :ಬೆಂಗಳೂರು- ಮಂಗಳೂರು ನಡುವೆ ಹಗಲು ಹೊತ್ತಿನಲ್ಲಿ ರೈಲಿನಲ್ಲಿ ಪ್ರಯಾಣ ಮಾಡುವ ಜನರಿಗೆ ಸೂಪರ್ ಸುದ್ದಿಯೊಂದು ಇಲ್ಲಿದೆ. ನೈಋತ್ಯ ರೈಲ್ವೆಗೆ ಗಾಜಿನ ಮೇಲ್ಛಾವಣಿ ಹೊಂದಿರುವ ಒಂದು ರೈಲು ಬೋಗಿಯನ್ನು ನೀಡಲಾಗಿದೆ.
ಭಾರತೀಯ ರೈಲ್ವೆ ನೀಡಿರುವ ವಿಸ್ಟಾಡೋಮ್ ಕೋಚ್ ಎಸಿ ರೈಲು ಬೋಗಿಯನ್ನು ಬೆಂಗಳೂರು-ಮಂಗಳೂರು ನಡುವೆ ಸಂಚಾರ ನಡೆಸುವ ರೈಲಿಗೆ ಜೋಡಿಸಲು ನೈಋತ್ಯ ರೈಲ್ವೆ ಚಿಂತನೆ ನಡೆಸಿದೆ. ಹಗಲು ಹೊತ್ತಿನಲ್ಲಿ ಉಭಯ ನಗರಗಳ ನಡುವೆ ಸಂಚಾರ ನಡೆಸುವ ರೈಲಿನಲ್ಲಿ ಈ ಬೋಗಿ ಇರಲಿದೆ.
ಗಾಜಿನ ಮೇಲ್ಛಾವಣಿ ಇರುವ ರೈಲು ಬೋಗಿ ಸಂಪೂರ್ಣ ಹವಾನಿಯಂತ್ರಿವಾಗಿದೆ. ಎಲ್ಇಡಿ ದೀಪ, ಜಿಪಿಎಸ್ ಆಧಾರಿತ ಮಾಹಿತಿ ವ್ಯವಸ್ಥೆಯನ್ನು ಈ ಬೋಗಿ ಹೊಂದಿದೆ. ದೇಶದ ಹಲವು ಪ್ರವಾಸಿತಾಣಗಳನ್ನು ಸಂಪರ್ಕಿಸುವ ರೈಲಿನಲ್ಲಿ ಇದನ್ನು ಬಳಕೆ ಮಾಡಲಾಗುತ್ತಿದೆ.
ಬೆಂಗಳೂರು-ಮಂಗಳೂರು ಹಗಲು ರೈಲಿನಗೆ ವಿಸ್ಟಾಡೋಮ್ ಕೋಚ್ ಅಳವಡಿಕೆ ಮಾಡುವ ಕುರಿತು ಚಿಂತನೆ ನಡೆದಿದೆ. ರೈಲು ಬೋಗಿ ನೈಋತ್ಯ ರೈಲ್ವೆಗೆ ತಲುಪಿದ ಬಳಿಕ ಯಾವ ರೈಲಿನಗೆ ಅದನ್ನು ಜೋಡಿಸಬೇಕು? ಎಂದು ಅಧಿಕಾರಿಗಳು ತೀರ್ಮಾನ ಕೈಗೊಳ್ಳಲಿದ್ದಾರೆ.
ಬೆಂಗಳೂರು-ಮಂಗಳೂರು ಮಾರ್ಗದ ರೈಲು ಹಾಸನ, ಸಕಲೇಶಪುರ ಮಾರ್ಗದ ಮೂಲಕ ಸಂಚಾರ ನಡೆಸಲಿದೆ. ಪಶ್ಚಿಮ ಘಟ್ಟದ ಈ ಭಾಗವನ್ನು ರೈಲಿನಲ್ಲಿ ಕುಳಿತು ಪ್ರಯಾಣಿಕರು ಸವಿಯಬಹುದಾಗಿದೆ. ಅದರಲ್ಲೂ ಮಳೆಗಾಲದಲ್ಲಿ ಈ ಮಾರ್ಗದಲ್ಲಿ ಸಂಚಾರ ನಡೆಸುವುದು ಒಂದು ವಿಶಿಷ್ಟ ಅನುಭವವಾಗಿದೆ. ಅರಕು ಕಣಿವೆ ಪ್ರದೇಶದಲ್ಲಿ ಈಗಾಗಲೇ ಭಾರತೀಯ ರೈಲ್ವೆ ವಿಸ್ಟಾಡೋಮ್ ಕೋಚ್ ಅಳವಡಿಕೆ ಮಾಡಿದೆ. ಜನರು ರೈಲಿನಲ್ಲಿ ಕುಳಿತು ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಬಹುದಾಗಿದೆ.