ಉಪ್ಪಿನಂಗಡಿ: ಚಿನ್ನಾಭರಣದ ಅಂಗಡಿ ತೆರೆಯುತ್ತಿದ್ದೇವೆ. ಆಶೀರ್ವಾದ ಮಾಡಿ ಎಂದು ಹೇಳಿ, ಮಂಕುಬೂದಿ ಎರಚಿ ಅರ್ಚಕರ ಪತ್ನಿಯೊಬ್ಬರ ಕತ್ತಿನಲ್ಲಿದ್ದ ಮೂರುವರೆ ಪವನ್ ತೂಕದ ಮಾಂಗಲ್ಯ ಸರವನ್ನು ಎಗರಿಸಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಉಪ್ಪಿನಂಗಡಿಯ ರಥಬೀದಿಯಲ್ಲಿರುವ ಹನುಮಾನ್ ದೇವಾಲಯಕ್ಕೆ ಹೋಗುವ ದಾರಿಯಲ್ಲಿನ ಅರ್ಚಕರ ಮನೆ ಬಾಗಿಲಿಗೆ ಬಂದ ಹಿಂದಿ ಮಾತನಾಡುತ್ತಿದ್ದ ವ್ಯಕ್ತಿಯೊಬ್ಬ ಮನೆಯಲ್ಲಿದ್ದ ಅರ್ಚಕರ ಪತ್ನಿಯಲ್ಲಿ ತನಗೆ ಸೂತಕವಿರುವುದರಿಂದ ದೇವಾಲಯಕ್ಕೆ ಹೋಗಲಾಗುವುದಿಲ್ಲ.ದೇವರಿಗೆ ಹರಕೆ ರೂಪದಲ್ಲಿ ತನ್ನ ಪರವಾಗಿ ಮುನ್ನೂರು ರೂಪಾಯಿ ಸಲ್ಲಿಸಿ ಎಂದು ತಲಾ 100 ರೂಪಾಯಿಯ 3 ನೋಟುಗಳನ್ನು ನೀಡಿ, ನಿಮ್ಮ ಮಾಂಗಲ್ಯ ಸರವನ್ನು ಅದಕ್ಕೆ ಸ್ಪರ್ಶಿಸಿ ಹಣವನ್ನು ಹಿಂತಿರುಗಿಸಲು ಮನವಿ ಮಾಡಿದ್ದಾನೆ.
ಈ ವೇಳೆ ನನ್ನ ಮಾಂಗಲ್ಯ ಸರವನ್ನು ನಿಮ್ಮ ನೋಟಿಗೆ ಯಾಕೆ ಸ್ಪರ್ಶಿಸಬೇಕೆಂದು? ಅರ್ಚಕರ ಪತ್ನಿ ಪ್ರಶ್ನಿಸಿದ್ದು, ಅದಕ್ಕೆ ನಾನು ಊರಿನಲ್ಲಿ ಚಿನ್ನಾಭರಣದ ಅಂಗಡಿಯನ್ನು ತೆರೆಯಲಿದ್ದೇನೆ. ಪತಿವ್ರತಾ ಮಹಿಳೆಯ ಮಾಂಗಲ್ಯ ಸರವನ್ನು ಸ್ಪರ್ಶಿಸಿದ ಹಣವನ್ನು ಅಂಗಡಿಯೊಳಗಿರಿಸಲು ಸೂಚಿಸಿದ್ದಾರೆ. ಅದಕ್ಕಾಗಿ ನಿಮ್ಮ ಮಾಂಗಲ್ಯ ಸರವನ್ನು ಈ ನೋಟಿಗೆ ಸ್ಪರ್ಶಿಸಿ ನೀಡಿ ಎಂದು ಎಂದಿದ್ದಾನೆ. ಆತನ ಮಾತನ್ನು ಸತ್ಯವೆಂದು ನಂಬಿದ ಮಹಿಳೆ ತನ್ನ ಮಾಂಗಲ್ಯವನ್ನು ಹಣಕ್ಕೆ ಸ್ಪರ್ಶಿಸಿದ್ದಾರೆ. ಈ ವೇಳೆ ಆತ, ಆ ರೀತಿಯಲ್ಲ. ಮಾಂಗಲ್ಯ ಸರವನ್ನು ಸಂಪೂರ್ಣ ತೆಗೆದು ಅದನು ಒಮ್ಮೆ ನೋಟಿನಲ್ಲಿಟ್ಟು ಕೊಡಿ ಎಂದು ತಿಳಿಸಿದಾಗ ಮಹಿಳೆಯು ಅದೇ ರೀತಿ ಮಾಡಿ ನೋಟನ್ನು ಆತನ ಕೈಯಲ್ಲಿ ನೀಡಿದ್ದಾರೆ.
ಈ ವೇಳೆ ಸ್ಥಳದಲ್ಲಿ ಏನಾಗುತ್ತಿದೆ ಎಂದು ಅರಿವಾಗುವಷ್ಟರಲ್ಲಿ ಆ ವ್ಯಕ್ತಿ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ. ಸ್ವಲ್ಪ ಹೊತ್ತಿನ ಬಳಿಕ ವಾಸ್ತವ ಸ್ಥಿತಿಗೆ ಬಂದ ಮಹಿಳೆ ತನ್ನ ಮಾಂಗಲ್ಯ ಸರ ಕೊರಳಲ್ಲಿ ಇಲ್ಲದಿರುವುದನ್ನು ಅರಿತು ಬೊಬ್ಬೆ ಹೊಡೆದಾಗ ಅಪರಿಚಿತ ವ್ಯಕ್ತಿ ಮಂಕುಬೂದಿ ಎರಚಿ ತನ್ನ ಮಾಂಗಲ್ಯ ಸರ ಎಗರಿಸಿರೋದು ಗೊತ್ತಾಗಿದೆ.
ಘಟನೆಗೆ ಸಂಬಂಧಿಸಿ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು ಸ್ಥಳದಲ್ಲಿನ ಸಿಸಿ ಕ್ಯಾಮೆರಗಳ ಆಧಾರದಲ್ಲಿ ಮಹತ್ವದ ಮಾಹಿತಿಯನ್ನು ಕಲೆ ಹಾಕಿದ್ದಾರೆ. ವಂಚಕರನ್ನು ಪತ್ತೆ ಹಚ್ಚುವ ವಿಶ್ವಾಸವನ್ನು ಎಸೈ ರಾಜೇಶ್ ಕೆ.ವಿ. ವ್ಯಕ್ತಪಡಿಸಿದ್ದಾರೆ.