ಲಕ್ನೋ: ಜ್ಞಾನವಾಪಿ ಮಸೀದಿ ಆವರಣದಲ್ಲಿ ನಡೆಸಿದ ಸರ್ವೆ ವೇಳೆ ಪತ್ತೆಯಾದ ವಸ್ತು ಶಿವಲಿಂಗವೇ ಅಥವಾ ನೀರಿನ ಕಾರಂಜಿಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ವೈಜ್ಞಾನಿಕ ತನಿಖೆ ನಡೆಸುವಂತೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಗೆ ನಿರ್ದೇಶನ ನೀಡುವಂತೆ ಕೋರಿ ಹಿಂದೂ ಪರ ಅರ್ಜಿದಾರರು ಸಲ್ಲಿಸಿದ್ದ ಮನವಿಯ ತೀರ್ಪನ್ನು ವಾರಣಾಸಿ ನ್ಯಾಯಾಲಯ ಶುಕ್ರವಾರ ಮುಂದೂಡಿದೆ.
ಪ್ರಕರಣ ತೀರ್ಪನ್ನು ಅಕ್ಟೋಬರ್ 11 ರಂದು ನೀಡಲಾಗುವುದು ಎಂದು ಜಿಲ್ಲಾ ನ್ಯಾಯಾಧೀಶ ಡಾ. ಎ.ಕೆ.ವಿಶ್ವೇಶ ಅವರು ಹೇಳಿದರು. ಮಸೀದಿ ಸಮಿತಿ ಪರ ವಕೀಲರು ಇಂದು ಆಕ್ಷೇಪ ವ್ಯಕ್ತಪಡಿಸಿದರು. ಜ್ಞಾನವಾಪಿ ಮಸೀದಿ ಆವರಣದಲ್ಲಿರುವ ಶಿವಲಿಂಗವು ಮೂಲ ಪ್ರಕರಣ ಆಸ್ತಿಯ ಭಾಗವಾಗಿದೆಯೇ ಅಥವಾ ಇಲ್ಲವೇ? ಶಿವಲಿಂಗ ರೂಪದ ಈ ಪಳಿಯುಳಿಯ ‘ವೈಜ್ಞಾನಿಕ ತನಿಖೆ’ಗೆ ನಿರ್ದೇಶಿಸಲು ನ್ಯಾಯಾಲಯಕ್ಕೆ ಅಧಿಕಾರವಿದೆಯೇ ಎಂದು ಪ್ರಶ್ನಿಸಿದರು. ಈ ಬಗ್ಗೆ ವಾದ ಮಂಡಿಸಲು ಅವಕಾಶ ನೀಡಬೇಕು ಎಂದು ಕೋರಿಕೊಂಡರು. ಇದಕ್ಕೆ ಒಪ್ಪಿಕೊಂಡ ನ್ಯಾಯಾಧೀಶರು ತೀರ್ಪಿನ ದಿನಾಂಕವನ್ನು ಮುಂದೂಡಿದರು.