ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಪಕ್ಕದಲ್ಲಿ ಯುವಕನಿಂದ ಚೂರಿ ಇರಿತಕ್ಕೊಳಗಾಗಿ ಗಂಭೀರವಾಗಿ ಗಾಯಗೊಂಡಿದ್ದ, ಯುವತಿ ಸಾವನ್ನಪ್ಪಿದ್ದಾಳೆ. ವಿಟ್ಲದ ಅಳಿಕೆ ನಿವಾಸಿ ಗೌರಿ(18) ಮೃತ ಯುವತಿ. ಕೊಲೆ ಮಾಡಿದ ಆರೋಪಿ ಪದ್ಮರಾಜ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಇರಿತಕ್ಕೊಳಗಾದ ನ ಯುವತಿ ಗೌರಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಆಕೆ ಅಷ್ಟರಲ್ಲಿ ಸಾವನ್ನಪ್ಪಿದ್ದಾಳೆ ಎನ್ನಲಾಗಿದೆ.
ಇನ್ನು ಮೃತ ಯುವತಿ ಪುತ್ತೂರಿನ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರಂತೆ. ಗೌರಿ ಮತ್ತು ಪದ್ಮರಾಜ್ ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಪದ್ಮರಾಜ್ ಮತ್ತು ಗೌರಿ ಇಬ್ಬರೂ ಹಲವು ಬಾರಿ ಗಲಾಟೆ ಮಾಡಿಕೊಂಡಿದ್ದು, ಪ್ರಕರಣ ವಿಟ್ಲ ಪೋಲೀಸ್ ಠಾಣೆ ಮೆಟ್ಟಲೇರಿತ್ತು.
ಘಟನೆಗೂ ಮುನ್ನ ಪುತ್ತೂರು ಬಸ್ ನಿಲ್ದಾಣದಲ್ಲಿ ಯುವಕ ಮತ್ತು ಯುವತಿ ಮಧ್ಯೆ ಮಾತಿನ ಚಕಮಕಿ ನಡೆದಿದೆ. ಅಲ್ಲಿಂದ ಆಕೆ ಮಹಿಳಾ ಪೊಲೀಸ್ ಠಾಣೆಯ ಬಳಿ ಬಂದಾಗ ಬೈಕ್ ನಲ್ಲಿ ಹಿಂಬಾಲಿಸಿಕೊಂಡು ಬಂದ ಪದ್ಮರಾಜ್ ಆಕೆಯ ಕತ್ತಿಗೆ ಚೂರಿಯಿಂದ ಇರಿದಿದ್ದಾನೆ. ಮೃತ ಗೌರಿ ಕುದ್ದು ಪದವಿನ ವಿಜಯನ್ ಎಂಬವರ ಪುತ್ರಿ .
ಚೂರಿ ಪ್ರಕರಣದ ಆರೋಪಿಯನ್ನು ಪುತ್ತೂರು ಪೊಲೀಸರು ಕೆಲವೇ ಗಂಟೆಯಲ್ಲಿ ಬಂಧಿಸಿದ್ದಾರೆ. ಬೈಕ್ ನಂಬರ್ ಆಧಾರದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ಕೃತ್ಯಕ್ಕೆ ಬಳಸಿದ ಚೂರಿ ಮತ್ತು ಬೈಕ್ ಅನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.