ಕುಂದಾಪುರ: ಅನ್ಯಕೋಮಿನ ಯುವಕನೊಬ್ಬ ತನಗೆ ವಂಚಿಸಿದ್ದಾನೆಂದು ಆರೋಪಿಸಿ ಯುವತಿಯೊಬ್ಬಳು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕುಂದಾಪುರದ ಉಪ್ಪಿನಕುದ್ರು ಎಂಬಲ್ಲಿ ನಡೆದಿದೆ.
ಇದೀಗ ಯುವತಿಯ ಪೋಷಕರು ದೂರು ನೀಡಿದ್ದು ಯುವತಿಯ ಸಾವಿಗೆ ಅನ್ಯಕೋಮಿನ ಯುವಕನೇ ಕಾರಣ ಎಂದು ಆರೋಪಿಸಿದ್ದಾರೆ.ಯುವತಿ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಆಕೆ ಅಜೀಜ್ ಎಂಬ ಯುವಕನನ್ನು ಪ್ರೀತಿಸುತ್ತಿದ್ದಳು. ಆತನಿಗೆ ಮೊದಲೇ ವಿವಾಹವಾಗಿತ್ತು. ಇನ್ನು ಅಜೀಜ್ ಯುವತಿಯನ್ನು ಮದುವೆಯಾಗುವುದಾಗಿ ಹೇಳಿ ಆಕೆಯೊಂದಿಗೆ ದೈಹಿಕ ಸಂಪರ್ಕ ಕೂಡ ಹೊಂದಿದ್ದ ಎನ್ನಲಾಗಿದೆ. ಪದೇ ಪದೇ ಯುವತಿ ಆತನ ಮನೆಗೆ ಹೋಗಿ ಬರುತ್ತಿದ್ದಳು.
ಆಕೆ ಆತ್ಮಹತ್ಯೆ ಮಾಡಿಕೊಳ್ಳುವ ಕೆಲವು ದಿನಗಳ ಹಿಂದೆ ಅಜೀಜ್ ಆಕೆ ಕೆಲಸ ಮಾಡುತ್ತಿದ್ದ ಬಟ್ಟೆ ಅಂಗಡಿಯ ಬಳಿ ಬಂದಾಗ ಯುವತಿ ಮದುವೆಯಾಗುವಂತೆ ಕೇಳಿ ಕೊಂಡಿದ್ದಾಳೆ. ಆಗ ಆತ ಅವಾಚ್ಯ ಶಬ್ಧಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಅಲ್ಲದೇ ಆತನ ಪತ್ನಿ ಕೂಡ ಇದಕ್ಕೆ ಕುಮ್ಮಕ್ಕು ನೀಡಿದ್ದಾಳೆ ಎನ್ನಲಾಗಿದೆ. ಕೊನೆಗೆ ದಾರಿ ತೋಚದ ಯುವತಿ ಮೇ 23 ರಂದು ರಾತ್ರಿ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಕೂಡಲೇ ಮನೆಯವರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ವೇಳೆ ಯುವತಿ ಎಲ್ಲಾ ವಿಚಾರವನ್ನು ಸಹೋದರನ ಬಳಿ ತಿಳಿಸಿದ್ದಾಳೆ. ಕೊನೆಗೆ ಚಿಕಿತ್ಸೆ ಫಲಿಸದೇ ಇಂದು ಯುವತಿ ಸಾವನ್ನಪ್ಪಿದ್ದಾಳೆ. ಇದೀಗ ಯುವತಿ ಪೋಷಕರು ಆರೋಪಿಯ ವಿರುದ್ಧ ದೂರು ದಾಖಲಿಸಿದ್ದಾರೆ.