ಉಳ್ಳಾಲ: ಕೊರಗಜ್ಜನಿಗೆ ನಿಂದನೆ ಮಾಡಿದ ಆರೋಪಿಯ ರಕ್ಷಣೆ ಮಾಡಿದ ಆರೋಪದಡಿ ಮುಡಿಪು ಸಾಂಬಾರ್ ತೋಟದ ವಕೀಲ, ಬಿಜೆಪಿ ಅಲ್ಪಸಂಖ್ಯಾತ ಘಟಕದ ನಾಯಕ ಮಹಮ್ಮದ್ ಅಸ್ಗರನ್ನು ಬಿಜೆಪಿ ಪಕ್ಷದಿಂದಲೇ ಉಚ್ಚಾಟಿಸಲಾಗಿದೆ.
ಜ.6 ರಂದು ವಿಟ್ಲ ಸಾಲೆತ್ತೂರಿನ ಮುಸ್ಲಿಂ ಸಮುದಾಯದ ಮದುವೆಯ ಔತಣ ಕೂಟದಲ್ಲಿ ತುಳುನಾಡಿನ ಆರಾಧ್ಯ ದೈವ ಕೊರಗಜ್ಜನ ವೇಷ ಧರಿಸಿ ಅಪಮಾನ ಮಾಡಿರುವುದಾಗಿ ಮದುಮಗ ಉಪ್ಪಳ ನಿವಾಸಿ ಉಮರುಲ್ ಬಾಷಿತ್ ವಿರುದ್ಧ ವಿಟ್ಲ ಠಾಣೆಯಲ್ಲಿ ದೂರು ದಾಖಲಾಗಿತ್ತು. ವಿಟ್ಲ ಪೊಲೀಸರು ಜ.8 ರಂದು ಭಾಷಿತ್ ಸಹೋದರ ಅರ್ಷದ್ ನನ್ನು ಬಂಧಿಸಿದ್ದರು. ಆದರೆ ಅದೇ ದಿನ ಸಂಜೆ ಬಿಜೆಪಿ ಅಲ್ಪಸಂಖ್ಯಾತ ಘಟಕದ ಮುಖಂಡ, ವಕೀಲ ಅಸ್ಗರ್ ಬಂಧಿತ ಆರೋಪಿಯನ್ನ ಜಾಮೀನಿನ ಮೇಲೆ ಬಿಡಿಸಿದ್ದು ಹಿಂದು ಸಂಘಟನೆಯ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿತ್ತು.
ಮಹಮ್ಮದ್ ಅಸ್ಗರ್ ಈ ಹಿಂದೆಯೂ ಇದೇ ರೀತಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದ ಬಗ್ಗೆ ಆರೋಪಗಳಿವೆ. ಬಿಜೆಪಿ ಮಂಗಳೂರು ಮಂಡಲದ ಅಲ್ಪಸಂಖ್ಯಾತ ಮೋರ್ಚಾದ ಪ್ರಧಾನ ಕಾರ್ಯದರ್ಶಿಯಾಗಿದ್ದ ವೇಳೆ ಸಚಿವ ಕೆ.ಎಸ್ ಈಶ್ವರಪ್ಪ ವಿರುದ್ಧ ಜಾಲತಾಣಗಳಲ್ಲಿ ಹರಿತವಾದ ಪೋಸ್ಟ್ ಹಾಕಿದ ಹಿನ್ನೆಲೆಯಲ್ಲಿ ಕಾರ್ಯದರ್ಶಿ ಸ್ಥಾನದಿಂದ ತೆರವಾಗಿದ್ದ ಸದ್ಯ ಮುಡಿಪು ಸಾಂಬಾರ್ ತೋಟದ ಬಿಜೆಪಿ ಬೂತ್ ಕಮಿಟಿ ಅಧ್ಯಕ್ಷನಾಗಿರುವ ಅಸ್ಗರ್ ಮತ್ತೊಮ್ಮೆ ಪಕ್ಷದ ಶಿಸ್ತು ಸಿದ್ಧಾಂತಗಳನ್ನ ಮೀರಿದಕ್ಕಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಸೂಚನೆಯಂತೆ ಕ್ಷೇತ್ರಾಧ್ಯಕ್ಷ ಚಂದ್ರಹಾಸ್ ಪಂಡಿತ್ ಹೌಸ್ ಅವರು ಅಸ್ಗರನ್ನು ಪಕ್ಷದಿಂದಲೇ ಉಚ್ಚಾಟಿಸಿ ಆದೇಶ ಮಾಡಿದ್ದಾರೆ.