ಭೋಪಾಲ್: ದೇವಸ್ಥಾನಕ್ಕೆ ಕದಿಯೋಕೆ ಬಂದ ಕಳ್ಳನೊಬ್ಬ ದೇವಸ್ಥಾನದ ಒಳಗೆ ನಿದ್ದೆಗೆ ಜಾರಿ ಪೊಲೀಸರು ಬಂದಾಗ ಚಳಿ ಇದೆ, ಸ್ವಲ್ಪ ಹೊತ್ತು ಮಲಗ್ತೀನಿ ಎಂದು ಹೇಳಿದ ವಿಚಿತ್ರ ಪ್ರಸಂಗವೊಂದು ನಡೆದಿದೆ.
ಅಂದ್ಹಾಗೆ ಇಂತಹದ್ದೊಂದು ಘಟನೆ ಮಧ್ಯಪ್ರದೇಶದ ಶಾಜಾಪುರದ ಲಾಲ್ಬಾಯ್ ಫುಲ್ಬಾಯ್ ದೇವಸ್ಥಾನಲ್ಲಿ ನಡೆದಿದೆ. ರಾತ್ರಿ ವೇಳೆ ದೇವಸ್ಥಾನಕ್ಕೆ ಕನ್ನ ಹಾಕಲು ಬಂದ ಕಳ್ಳ, ದೇವಸ್ಥಾನದ ಬಳಿ ಬಂದು ದೇವಸ್ಥಾನದ ಬಾಗಿಲು ಮುರಿದಿದ್ದಾನೆ. ದೇವಸ್ಥಾನದಲ್ಲಿ ಬೆಲೆ ಬಾಳುವ ವಸ್ತು ಇಡಲೆಂದು ಮಾಡಲಾಗಿದ್ದ ಕೋಣೆಯನ್ನೂ ಮುರಿದಿದ್ದಾನೆ. ಅಲ್ಲಿದ್ದ ಸಾಮಾನನ್ನೆಲ್ಲ ಗಂಟು ಕಟ್ಟಿಕೊಂಡಿದ್ದಾನೆ. ಅಷ್ಟರಲ್ಲಿ ಆತನಿಗೆ ನಿದ್ರೆ ಬಂದಿದೆ. ಕೋಣೆಯ ಬಾಗಿಲು ಹಾಕಿಕೊಂಡು, ಅಲ್ಲೇ ಇದ್ದ ಮಂಚದ ಮೇಲೆ ಬೆಚ್ಚಗೆ ಹೊದ್ದುಕೊಂಡು ಮಲಗಿದ್ದಾನೆ.
ಬೆಳಗ್ಗೆ ದೇವಸ್ಥಾನದ ಪೂಜಾರಿ, ದೇವರ ಪೂಜೆ ಮಾಡಲು ದೇವಸ್ಥಾನಕ್ಕೆ ಬಂದಿದ್ದಾನೆ. ಆಗ ಅವನಿಗೆ ಆಘಾತವಾಗಿದೆ. ದೇವಸ್ಥಾನದ ಬೀಗ ಮುರಿದಿದೆ, ಒಳಗಿನ ಕೋಣೆ ಒಳಗಿನಿಂದ ಲಾಕ್ ಆಗಿದೆ ಎನ್ನುವುದು ಗೊತ್ತಾದಾಕ್ಷಣ ಆತ ಪೊಲೀಸರಿಗೆ ಕರೆ ಮಾಡಿದ್ದಾನೆ. ತಕ್ಷಣ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ.
ಪೊಲೀಸರು ಕೋಣೆಯ ಬಾಗಿಲನ್ನು ಮುರಿದು ಒಳಗೆ ಹೋಗಿದ್ದಾರೆ. ಗಾಢ ನಿದ್ರೆಯಲ್ಲಿದ್ದ ಕಳ್ಳನನ್ನು ಎಬ್ಬಿಸಿದ್ದಾರೆ. ಕಳ್ಳ ಎದ್ದೊಡನೆ ಪೊಲೀಸರನ್ನು ನೋಡಿ, ‘ತುಂಬಾ ಚಳಿ ಇದೆ, ಸ್ವಲ್ಪ ಹೊತ್ತು ಮಲಗ್ತೀನಿ. ಆಮೇಲೆ ಪೊಲೀಸ್ ಸ್ಟೇಷನ್ಗೆ ಹೋಗೋಣ’ ಎಂದು ಹೇಳಿದ್ದಾನೆ. ಕಳ್ಳನ ವರ್ತನೆಯಿಂದ ನಕ್ಕ ಪೊಲೀಸರು, ಆತನನ್ನು ಬಂಧಿಸಿ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಕಳ್ಳತನವಾಗದಿರುವಂತೆ ದೇವಿಯೇ ಕಾಪಾಡಿದ್ದಾಳೆ ಎಂದು ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.