ಬಂಟ್ವಾಳ : ನನ್ನ ಮಗ ಶರತ್ ಮಡಿವಾಳನನ್ನು ಕೊಲೆ ಮಾಡಿಸಿದ್ದು ಮಾಜಿ ಸಚಿವ ರಮಾನಾಥ ರೈ. ರಮಾನಾಥ ರೈ, ಪ್ರಕಾಶ್ ಶೆಟ್ಟಿ, ಎಮ್ಮೆಕೆರೆ ಸಲಾಂ ಇವರೆಲ್ಲಾ ಸೇರಿ ಉದ್ದೇಶಪೂರ್ವಕವಾಗಿ ಶರತ್ ಹತ್ಯೆ ಮಾಡಿದರು ಎಂದು ಬಂಟ್ವಾಳದ ಆರ್ಎಸ್ಎಸ್ ಕಾರ್ಯಕರ್ತ ಶರತ್ ಮಡಿವಾಳ ತಂದೆ ತನಿಯಪ್ಪ ಮಡಿವಾಳ ಆರೋಪ ಮಾಡಿದ್ದಾರೆ. ಆಗಿನ ಪೊಲೀಸ್ ಆಧಿಕಾರಿ ವಿಚಾರಣೆ ಕೂಡ ಮಾಡಿಲ್ಲ. ಆಗಿನ ಅಧಿಕಾರಿ ಆರ್ಕೆ ದತ್ತಾ ಬಿ.ಸಿ. ರೋಡ್ ನಲ್ಲಿ ತಿರುಗಾಟ ನಡೆಸಿದ್ದರಷ್ಟೇ, ಯಾವುದೇ ರೀತಿಯ ವಿಚಾರಣೆ ನಡೆಸಿಲ್ಲವೆಂದು ಅವರು ಆರೋಪ ಮಾಡಿದ್ದಾರೆ.
ನನಗೆ ಸರ್ಕಾರ ಯಾವ ಸೌಲಭ್ಯವನ್ನೂ ಕೊಟ್ಟಿಲ್ಲ, ನನ್ನದು ಈಗ ಕಷ್ಟದ ಜೀವನ. ಸಿದ್ದರಾಮಯ್ಯ ಶಾದಿ ಭಾಗ್ಯ ಎಲ್ಲಾ ಕೊಟ್ಟು ಮುಸಲ್ಮಾನರನ್ನೇ ನೋಡಿದ್ದು, ಹಿಂದೂಗಳನ್ನ ನೋಡಿಲ್ಲ ಎಂದು ತನಿಯಪ್ಪ ಮಡಿವಾಳ ಆರೋಪ ಮಾಡಿದ್ದಾರೆ.
ನನಗೆ ಬಂದ ಸ್ಥಿತಿ ಶಿವಮೊಗ್ಗದ ಹರ್ಷನ ತಂದೆಗೆ ಬರಬಾರದು. ಸರ್ಕಾರ ಅವರಿಗೆ ವ್ಯವಸ್ಥೆ ಮಾಡಬೇಕು. ನನಗೆ ಆಗಿನ ಕಾಂಗ್ರೆಸ್ ಸರ್ಕಾರ ಏನೂ ಸಹಾಯ ಮಾಡಿಲ್ಲ, ಬಿಜೆಪಿಯವರು ಅಳಿಲು ಸೇವೆ ಮಾಡಿದ್ದಾರೆ. ತಕ್ಷಣ ಪಿಎಫ್ ಐ ಮತ್ತು ಎಸ್ ಡಿಪಿಐ ಬ್ಯಾನ್ ಮಾಡಿ ನ್ಯಾಯ ಕೊಡಿಸಿ. ಹರ್ಷ ಸತ್ತದ್ದನ್ನ ಟಿವಿಯಲ್ಲಿ ನೋಡಿ ನನಗೆ ಸಹಿಸಲು ಆಗಿಲ್ಲ. ನನ್ನ ಮಗನನ್ನ ಅಂಗಡಿಯೊಳಗೆ ಹೊಕ್ಕಿ ಕೊಂದದ್ದು, ಹರ್ಷನನ್ನ ಅಟ್ಟಾಡಿಸಿ ಕೊಂದದ್ದು. ನನ್ನ ಲೆಕ್ಕದಲ್ಲಿ ಈ ಎರಡೂ ಹತ್ಯೆಗಳು ಒಂದೇ ರೀತಿಯಲ್ಲಿ ಆಗಿವೆ. ಎಸ್ ಡಿಪಿಐನವರು ಕಾದು ಕೂತು ಮಾಡ್ತಾರೆ, ಹಿಂದೂಗಳನ್ನ ಟಾರ್ಗೆಟ್ ಮಾಡಿ ಕೊಲ್ತಾರೆ. ಎಸ್ ಡಿಪಿಐ ಮತ್ತು ಪಿಎಫ್ ಐಗೆ ದುಡ್ಡು ಕೊಟ್ಟು ಕೊಲೆ ಮಾಡಿಸ್ತಾರೆ. ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದೆ. ತಕ್ಷಣ ಪಿಎಫ್ ಐ ಮತ್ತು ಎಸ್ ಡಿಪಿಐ ಬ್ಯಾನ್ ಮಾಡಲಿ ಎಂದು ಅವರು ಆಗ್ರಹಿಸಿದ್ದಾರೆ.