ಮಂಗಳೂರು: ವಿಧಾನ ಪರಿಷತ್ ಮಾಜಿ ಸದಸ್ಯ ಐವಾನ್ ಡಿಸೋಜಾ ಅವರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಕೆಲದಿನಗಳ ಹಿಂದೆ ಇವರನ್ನು ಭೇಟಿಯಾಗಿದ್ದ ಮಾಜಿ ಸಚಿವ ಬಿ.ರಾಮನಾಥ ರೈ ಮತ್ತು ಪುತ್ತೂರು ಮಾಜಿ ಶಾಸಕಿ ಶಕುಂತಲಾ ಶೆಟ್ಟಿಯವರು ಸ್ವಯಂ ಕ್ವಾರಂಟೈನ್ ಗೆ ಒಳಗಾಗಿದ್ದಾರೆ.
ಕಳೆದ ಶುಕ್ರವಾರ ಕೆಪಿಸಿಸಿ ನೂತನ ಅಧ್ಯಕ್ಷ ಡಿಕೆ.ಶಿವಕುಮಾರ್ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ ಕೈಗೊಂಡಿದ್ದ ಸಮಯದಲ್ಲಿ ಐವನ್ ಡಿಸೋಜ, ರಮಾನಾಥ ರೈ, ಯು.ಟಿ ಖದರ್, ಮಿಥುನ್ ರೈ ಸೇರಿದಂತೆ ಜಿಲ್ಲೆಯ ಹೆಚ್ಚಿನ ಎಲ್ಲಾ ಕಾಂಗ್ರೆಸ್ ನಾಯಕರು ಒಟ್ಟಿಗೆ ಸೇರಿದ್ದರು.
ವಿಧಾನಪರಿಷತ್ ಸದಸ್ಯ ಐವನ್ ಡಿಸೋಜರಿಗೆ ಕೊರೋನಾ ತಗುಲಿರುವುದು ದೃಢವಾದ ಬೆನ್ನಲ್ಲೇ, ಶಾಸಕ ಯುಟಿ ಖಾದರ್ ಸ್ವಯಂ ಕ್ವಾರಂಟೈನ್ ಗೆ ಒಳಗಾಗಿದ್ದರು. ಇದೀಗ ಮಾಜಿ ಸಚಿವ ಬಿ.ರಾಮನಾಥ ರೈ ಮತ್ತು ಪುತ್ತೂರು ಮಾಜಿ ಶಾಸಕಿ ಶಕುಂತಲಾ ಶೆಟ್ಟಿ ಕ್ವಾರಂಟೈನ್ ಆಗಿದ್ದಾರೆ.
ಕ್ವಾರಂಟೈನ್ ಆಗಿರುವ ರಮಾನಾಥ ರೈ ಮಾತನಾಡಿ, ನಾನು ಎರಡು ದಿನಗಳಿಂದ ಸ್ವಯಂ ಕ್ವಾರಂಟೈನ್ ಗೆ ಒಳಗಾಗಿದ್ದೇನೆ. ಆದ್ದರಿಂದ ಈಗಾಗಲೇ ನಿಗದಿಯಾಗಿರುವ ಜನ ಸಾಮಾನ್ಯರ ಭೇಟಿ, ಕ್ಷೇತ್ರದಲ್ಲಿ ನಿಗದಿಯಾಗಿದ್ದ ವಿವಿಧ ಕಾರ್ಯಕ್ರಮಗಳನ್ನು ರದ್ದುಗೊಳಿಸಿರುವುದಾಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕ್ಷೇತ್ರದ ಜನರು ಯಾವುದೇ ಸಮಸ್ಯೆಗಳಿದ್ದರೆ ದೂರವಾಣಿ ಮೂಲಕ ನನ್ನನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದ್ದಾರೆ.