ರಾಂಚಿ: ಬಹುಶಃ ಇಂಥದ್ದೊಂದು ಘಟನೆಯನ್ನು ರೈಲ್ವೆ ಇಲಾಖೆಯ ಸಿಬ್ಬಂದಿ ತಮ್ಮ ಜೀವಮಾನದಲ್ಲಿಯೇ ಕಂಡಿರಲಿಕ್ಕಿಲ್ಲವೇನೋ.,, ಅಂಥದ್ದೊಂದು ಅಪರೂಪದ ಘಟನೆ ಇಂದು ನಡೆದಿದೆ.
ಕಾನೂನು ಪದವೀಧರೆ ಯುವತಿಗೊಬ್ಬಳ ಜಿದ್ದಿನಿಂದಾಗಿ ರೈಲು ಈಕೆಯನ್ನು ಹೊತ್ತು 535 ಕಿ.ಮೀ. ಚಲಿಸಿದೆ! ಈಕೆಯ ಜತೆ ವಾದ ಮಾಡಲಾಗದೇ ರೈಲ್ವೆ ಇಲಾಖೆ ಸಿಬ್ಬಂದಿ ಸುಸ್ತಾದ ಘಟನೆ ಇದು. ವಿಷಯ ಏನೆಂದರೆ, ಟೋರಿ ಜಂಕ್ಷನ್ನಲ್ಲಿ ಪ್ರತಿಭಟನೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ದೆಹಲಿ-ರಾಂಚಿ ರಾಜಧಾನಿ ಎಕ್ಸ್ಪ್ರೆಸ್ ರೈಲು ನಿನ್ನೆ (ಗುರುವಾರ) ಹಲವು ಗಂಟೆ ಡಾಲ್ಟೋಂಗಂಜ್ ನಿಲ್ದಾಣದಲ್ಲಿ ಸಿಲುಕಿಕೊಂಡಿತ್ತು. ಇದರಲ್ಲಿ 931 ಪ್ರಯಾಣಿಕರು ಇದ್ದರು.
ಪ್ರತಿಭಟನೆಯಿಂದಾಗಿ ಮುಂದೆ ರೈಲು ಹೋಗಲು ಸಾಧ್ಯವಾಗದ ಕಾರಣ, ರೈಲ್ವೆ ಇಲಾಖೆ ಮನವಿ ಮಾಡಿಕೊಂಡು 930 ಪ್ರಯಾಣಿಕರನ್ನು ಕೆಳಕ್ಕೆ ಇಳಿಸಿದರು. ಡಾಲ್ಟೋಂಗಂಜ್ ನಿಲ್ದಾಣದಿಂದ ರಾಂಚಿಗೆ ಬಸ್ ಮೂಲಕ ಕರೆದುಕೊಂಡು ಹೋಗುವ ವ್ಯವಸ್ಥೆಯನ್ನೂ ಮಾಡಲಾಯಿತು.
ದರೆ ಕಾನೂನು ಪದವೀಧರೆ ಯುವತಿಯೊಬ್ಬಳ ಮಾತ್ರ ಜಪ್ಪಯ್ಯ ಎಂದರೂ ರೈಲಿನಿಂದ ಇಳಿಯಲಿಲ್ಲ. ಬಸ್ಸಿಗೆ ತಾನು ಹೋಗಲ್ಲ ಎಂದಳು. ಟ್ಯಾಕ್ಸಿಯಲ್ಲಿ ಕಳುಹಿಸುವ ಬಗ್ಗೆ ಚರ್ಚಿಸಿದರೂ ಅದರಲ್ಲಿಯೂ ತಾನು ತೆರಳಲ್ಲ ಎಂದು ಜಿದ್ದು ಹಿಡಿದು ಕುಳಿತಳು. ಅನನ್ಯಾ ಎಂಬ ಹೆಸರಿನ ಈ ಯುವತಿಯ ಮನವೊಲಿಸಲು ರೈಲ್ವೆ ಅಧಿಕಾರಿಗಳಿಗೆ ಸಾಧ್ಯವಾಗಲಿಲ್ಲ.
‘ನಾನು ರೈಲಿಗೆ ದುಡ್ಡು ಪಾವತಿ ಮಾಡಿದ್ದೇನೆ. ನಾನು ಬಸ್ಸೋ, ಟ್ಯಾಕ್ಸಿಯಲ್ಲಿ ಹೋಗುವುದಿಲ್ಲ. ಇದೇ ರೈಲಿನಲ್ಲಿಯೇ ಹೋಗುವೆ. ಎಷ್ಟು ದಿನವಾದರೂ ಸರಿ’ ಎಂದು ಕುಳಿತುಬಿಟ್ಟಳು.
ನಂತರ ಮನವೊಲಿಕೆಯ ಪ್ರಯತ್ನಗಳೆಲ್ಲವೂ ವಿಫಲವಾಗಿ, ಸಿಬ್ಬಂದಿ, ಅಧಿಕಾರಿಗಳೆಲ್ಲರೂ ಸುಸ್ತಾದ ಮೇಲೆ ಈಕೆ ಒಬ್ಬಳಿಗಾಗಿ ರೈಲು ಮಾರನೆಯ ದಿನ ಹೊರಟಿತು. ಆದರೆ ಆ ದಾರಿಯಲ್ಲಿ ಹೋಗುವ ಹಾಗೆ ಇರಲಿಲ್ಲ. ಇದರಿಂದಾಗಿ ರೈಲಿನ ಮಾರ್ಗ ಬದಲಿಸಿ 535 ಕಿಲೋಮೀಟರ್ ದೂರವನ್ನು ಗೋಮೋ ಮತ್ತು ಬೊಕಾರೊ ಮೂಲಕ ತಿರುಗಿಸಲಾಯಿತು. ಇದು ಸಾಮಾನ್ಯ ಮಾರ್ಗಕ್ಕಿಂತ 225 ಕಿಲೋಮೀಟರ್ ಹೆಚ್ಚಾಗಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಯುವತಿ, ‘ಬಸ್ ಅಥವಾ ಟ್ಯಾಕ್ಸಿ ಮೂಲಕ ತೆರಳುವಂತೆ ನನ್ನ ಮೇಲೆ ಒತ್ತಡ ಹಾಕಿದರು. ಆದರೆ ನಾನ್ಯಾಕೆ ಅವರ ಒತ್ತಡಕ್ಕೆ ಮಣಿಯಬೇಕು. ರೈಲಿಗೆ ದುಡ್ಡು ಪಾವತಿಸಿದ ಮೇಲೆ ಅದರಲ್ಲಿಯೇ ಹೋಗಬೇಕು. ಈ ಹಿನ್ನೆಲೆಯಲ್ಲಿ ನಾನು ಕೂಡಲೇ ಟ್ವಿಟ್ಟರ್ ಮೂಲಕ ಭಾರತೀಯ ರೈಲ್ವೆಗೆ ಮಾಹಿತಿ ನೀಡಿದೆ. ಅವರು ನನ್ನನ್ನು ರಾಂಚಿಗೆ ರೈಲಿನಲ್ಲಿ ಕಳುಹಿಸಿದರು ಎಂದಿದ್ದಾರೆ.