ಮಂಗಳೂರು : ಕರಾವಳಿಯಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆಯಲ್ಲಿ ಮೀನುಗಾರಿಕೆಯ ಕೊಡುಗೆ ಮಹತ್ವದ್ದಾಗಿದೆ. ಈ ನಿಟ್ಟಿನಲ್ಲಿ ಒಳನಾಡು ಮೀನುಗಾರಿಕೆಗೂ ಒತ್ತು ನೀಡಲಾಗುವುದು ಎಂದು ಒಳನಾಡು ಜಲಸಾರಿಗೆ, ಬಂದರು ಮತ್ತು ಮೀನುಗಾರಿಕಾ ಸಚಿವ ಎಸ್.ಅಂಗಾರ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಸಂಚಾರಿ ಶೀತಲೀಕರಣ ವಾಹನಗಳಿಗೆ ನಗರದ ಹೊಯ್ಗೆ ಬಜಾರಿನಲ್ಲಿರುವ ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮ ನಿಯಮಿತದ ಕೇಂದ್ರ ಕಚೇರಿ ಆವರಣದಲ್ಲಿಂದು ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.
ಕರಾವಳಿಯ ಪ್ರಮುಖ ವಾಣಿಜ್ಯ ಬೆಳೆಗಳಾದ ಅಡಿಕೆ ಬೆಳೆಗಾರರು ಕೊಳೆ ರೋಗ, ಹಳದಿ ರೋಗದ ಸಮಸ್ಯೆ ಎದುರಿಸುತ್ತಿದ್ದಾರೆ. ಜಿಲ್ಲೆಯಲ್ಲಿ ನಿರುದ್ಯೋಗದ ಸಮಸ್ಯೆ ಇರುವ ಸಂದರ್ಭದಲ್ಲಿ ಸಾಕಷ್ಟು ಜನರಿಗೆ ಉದ್ಯೋಗ ಒದಗಿಸಿರುವ ಮೀನುಗಾರಿಕೆಯನ್ನು ಇನ್ನಷ್ಟು ಅಭಿವೃದ್ಧಿಪಡಿಸಿ ಜನರಿಗೆ ಪರ್ಯಾಯ ಉದ್ಯೋಗ ದೊರಕಿಸಿ ಕೊಡಲು ಗ್ರಾಮೀಣ ಭಾಗದ ಒಳನಾಡಿನಲ್ಲಿಯೂ ಮೀನುಗಾರಿಕೆ ಒತ್ತು ನೀಡಲಾಗುವುದು.
ದೂರದ ಊರುಗಳಿಗೆ ತ್ವರಿತವಾಗಿ ತಾಜಾ ಮೀನು ದೊರೆಯುವಂತೆ ಮಾಡುವ ನಿಟ್ಟಿನಲ್ಲಿ ಶೀತಲೀಕರಣ ವಾಹನ ಉಪಯುಕ್ತವಾಗಲಿದೆ. ಯಾವುದೇ ಕೃಷಿ ಪರಿಸರ ಸ್ನೇಹಿಯಾಗಿರಬೇಕು ಉದಾಹರಣೆಗೆ ಶುಂಠಿ ಬೆಳೆ, ರಬ್ಬರ್ ಕೃಷಿ ಸತತವಾಗಿ ಬೆಳೆದ ಸಂದರ್ಭದಲ್ಲಿ ಅದರಿಂದ ಮಣ್ಣಿನ ಫಲವತ್ತತೆಯ ಮೇಲೆ ಯಾವ ಸಮಸ್ಯೆಯಾಗುತ್ತದೆ ಎನ್ನುವ ಎಚ್ಚರಿಕೆ ಇರಬೇಕಾಗಿದೆ. ಇಲ್ಲದೆ ಹೋದರೆ ಅಂತಹ ಕೃಷಿಯಿಂದ ಪರಿಸರಕ್ಕೆ ಹಾನಿಯಾಗುವ ಸಂಭವವಿದೆ. ಅದೇ ರೀತಿ ಸಮುದ್ರದ ಮೀನುಗಾರಿಕೆ ನಡೆಸುವಾಗಲೂ ಮೀನಿನ ಸಂತತಿಗೆ ಹಾನಿ ಯಾಗದಂತೆ ಎಚ್ಚರ ವಹಿಸಿ ಮೀನುಗಾರಿಕಾ ಬಲೆ ಹಾಗೂ ಇನ್ನಿತರ ಸಾಧನಗಳನ್ನು ಬಳಸಬೇಕು ಆಗ ಮೀನಿನ ಸಂತತಿಗೆ ಹಾನಿಯಾಗದೆ ಸಮುದ್ರ ದಿಂದಲು ಹೆಚ್ಚು ಮೀನು ಪಡೆಯಲು ಸಾಧ್ಯ ಎಂದು ಸಚಿವ ಅಂಗಾರ ತಿಳಿಸಿದ್ದಾರೆ.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶಾಸಕ ವೇದವ್ಯಾಸ ಕಾಮತ್, ಕರ್ನಾಟಕ ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್ ಮಾತನಾಡಿದರು. ಸಮಾರಂಭದಲ್ಲಿ ಮನಪಾ ಮೇಯರ್ ಪ್ರೇಮಾನಂದ ಶೆಟ್ಟಿ, ನಿಗಮದ ಸಲಹೆಗಾರರಾದ ವಿ.ಕೆ.ಶೆಟ್ಟಿ, ನಿರ್ದೇಶಕ ಸಂದೀಪ್ ಕುಮಾರ್, ಮಾಜಿ ಮೇಯರ್ ದಿವಾಕರ ಪಾಂಡೇಶ್ವರ, ಮನಪಾ ಸದಸ್ಯೆ ರೇವತಿ ಮೊದಲಾದವರು ಉಪಸ್ಥಿತರಿದ್ದರು. ನಿಗಮದ ವ್ಯವಸ್ಥಾಪಕ ನಿರ್ದೇಶಕ ಗುಂಡುಮಣಿ ವಂದಿಸಿದರು. ಜಿ.ಎಂ ಮುದ್ದಣ್ಣ ಕಾರ್ಯಕ್ರಮ ನಿರೂಪಿಸಿದರು.