ಮಂಗಳೂರು : ಶ್ರೀ ಉಲ್ಕಾ ಮೀನು ಕಾರ್ಖಾನೆಯಲ್ಲಿ ನಡೆದ ದುರಂತದಲ್ಲಿ ಮೃತಪಟ್ಟಿದ್ದ ಐದು ಮಂದಿಯ ಮೃತದೇಹವನ್ನು ಇಂದು ಆಸ್ಪತ್ರೆಯಿಂದ ಬೆಂಗಳೂರು ಮೂಲಕ ಪಶ್ಚಿಮ ಬಂಗಾಲಕ್ಕೆ ಕಳುಹಿಸಲಾಗಿದೆ.ಅಸ್ವಸ್ಥರಾಗಿದ್ದ ಮೂವರೂ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.
ಪೆರ್ಮುದೆ ಗ್ರಾಮದ ಮಂಗಳೂರು ವಿಶೇಷ ಆರ್ಥಿಕ ವಲಯ (ಎಂಎಸ್ಇಝೆಡ್ನ)ದ ಮೀನು ಸಂಸ್ಕರಣಾ ಘಟಕದಲ್ಲಿ ಭಾನುವಾಪ ಸಂಜೆ ನಡೆದ ದುರಂತದಲ್ಲಿ ಪಶ್ಚಿಮ ಬಂಗಾಳ ಮೂಲದ ಐದು ಮಂದಿ ಕಾರ್ಮಿಕರಾದ ಮುಹಮ್ಮದ್ ಸಮೀಉಲ್ ಇಸ್ಲಾಂ, ಉಮ್ಮರ್ ಫಾರೂಕ್, ನಿಝಾಮುದ್ದೀನ್ ಆಲಿಸ್, ಮಿರಾಜುಲ್ ಇಸ್ಲಾಂ ಮತ್ತು ಶರಾಫತ್ ಅಲಿ ಮೃತಪಟ್ಟಿದ್ದರು. ಹಸನ್ ಅಲಿ, ಮುಹಮ್ಮದ್ ಕರೀಬುಲ್ಲಾ ಮತ್ತು ಹಫೀಝುಲ್ಲಾ ಅಸ್ವಸ್ಥರಾಗಿದ್ದರು.
ಸೋಮವಾರ ರಾತ್ರಿ ಮೃತರ ಸಂಬಂಧಿಕರು ಆಗಮಿಸಿದ ಬಳಿಕ ಪೊಲೀಸ್ ಇಲಾಖೆ ನೆರವಿನೊಂದಿಗೆ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ, ಇಂದು ಬೆಂಗಳೂರು ಮೂಲಕ ವಿಮಾನದಲ್ಲಿ ಮೃತದೇಹಗಳನ್ನು ಪಶ್ಚಿಮ ಬಂಗಾಳಕ್ಕೆ ಕಳುಹಿಸಿಕೊಡುವ ವ್ಯವಸ್ಥೆ ಮಾಡಲಾಗಿದೆ. ಈ ವೇಳೆ ಮಹೇಶ್ ಕುಮಾರ್, ಇನ್ಸ್ಪೆಕ್ಟರ್ ಸಂದೇಶ್ ಪಿ.ಜಿ. ಮತ್ತಿತರರಿದ್ದರು.