ಉಡುಪಿ : ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಮೊದಲ ದಿನದ ಲಕ್ಷದೀಪೋತ್ಸವ ಬಹಳ ವಿಜೃಂಭಣೆಯಿಂದ ನಡೆಯಿತು. ಶುಭ ಮುಹೂರ್ತದಲ್ಲಿ ಶ್ರೀಕೃಷ್ಣನ ಸನ್ನಿಧಾನದಿಂದ ಮಧ್ವ ಸರೋವರಕ್ಕೆ ಬಂದು ಅಲ್ಲಿ 3ಸುತ್ತು ತೆಪ್ಪೋತ್ಸವ ನಡೆದ ಬಳಿಕ, ಪಲ್ಲಕ್ಕಿಯಲ್ಲಿ ಕೃಷ್ಣನನ್ನು ಕುಳ್ಳಿರಿಸಿಕೊಂಡು ರಥದಲ್ಲಿ ದೇವರನ್ನು ಕುಳ್ಳಿರಿಸಲಾಯಿತು.
ಭಕ್ತರು ರಥಬೀದಿಯಲ್ಲಿ ಹಣತೆಗೆ ದೀಪ ಹಚ್ಚಿದರು. ಮಳೆ ಸ್ವಲ್ಪ ಮಟ್ಟಿಗೆ ಸಮಸ್ಯೆಯನ್ನು ಉಂಟುಮಾಡಿತು. ವ್ಯಾಪಾರಸ್ತರಿಗೆ ಕೊಂಚ ಸಮಸ್ಯೆ ಆಯ್ತು. ಆದರೆ ದೇವರು ರಥ ಬೀದಿಗೆ ಬಂದಾಗ ಮಳೆ ಸಂಪೂರ್ಣ ನಿಂತಿತ್ತು.
ಒಂದು ರಥದಲ್ಲಿ ಅನಂತೇಶ್ವರ ಹಾಗೂ ಚಂದ್ರೇಶ್ವರ ದೇವರ ಪೂಜೆ ಮಾಡಲಾಯಿತು. ಇನ್ನೊಂದು ರಥದಲ್ಲಿ ಶ್ರೀಕೃಷ್ಣನ ಮೂರ್ತಿ ಹಾಗೂ ಮುಖ್ಯಪ್ರಾಣನ ಮೂರ್ತಿಯನ್ನು ಕುಳ್ಳಿರಿಸಿ ಪೂಜೆಯನ್ನು ಮಾಡಿದ ನಂತರ ರಥೋತ್ಸವ ಆರಂಭವಾಯಿತು.
ರಥದಲ್ಲಿ ರಥಬೀದಿಗೆ ಒಂದು ಸುತ್ತು ಹಾಕುವ ಮೂಲಕ ಲಕ್ಷದೀಪೋತ್ಸವ ಸಂಪನ್ನಗೊಂಡಿತು. ಸಹಸ್ರ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರು. ಈ ವೇಳೆ ಸಿಡಿಮದ್ದು ಪ್ರದರ್ಶನವೂ ನಡೆಯಿತು.