ಕುಂದಾಪುರ; ಕಿಡಿಗೇಡಿಗಳ ರಾಕ್ಷಸಿ ಕೃತ್ಯಕ್ಕೆ ದಿನಸಿ ಅಂಗಡಿ ಸುಟ್ಟ ಕರಕಲಾದ ಘಟನೆ ಕುಂದಾಪುರ ತಾಲೂಕಿನ ಜಪ್ತಿಯಲ್ಲಿ ನಡೆದಿದೆ.
ಅಂಬಿಕಾ ಮತ್ತು ಅವರ ಪತಿ ನಡೆಸುತ್ತಿದ್ದ ದಿನಸಿ ಅಂಗಡಿಗೆ ನಿನ್ನೆ ರಾತ್ರಿ 10 ಗಂಟೆ ವೇಳೆಗೆ ಬಾಗಿಲು ಹಾಕಿ ಹೋದ ಬಳಿಕ ಯಾರೋ ಬೆಂಕಿ ಹಚ್ಚಿದ್ದಾರೆ ಎನ್ನಲಾಗಿದೆ. ತಕ್ಷಣವೇ ಸ್ಥಳೀಯ ವ್ಯಕ್ತಿ ಅಂಗಡಿ ಮಾಲೀಕರಿಗೆ ಫೋನ್ ಮಾಡಿ ಅಂಗಡಿಗೆ ಬೆಂಕಿ ಬಿದ್ದಿರುವುದಾಗಿ ತಿಳಿಸಿದ್ದರು. ಅಕ್ಕಪಕ್ಕದವರು ಹಾಗೂ ಇತರರು ಸೇರಿ ನೀರು ಹಾಕಿ ಬೆಂಕಿ ನಂದಿಸಿದ್ದರೂ ಅಂಗಡಿಯಲ್ಲಿದ್ದ ಸೊತ್ತುಗಳು ಸುಟ್ಟು ಹೋಗಿವೆ. ಬಳಿಕ ಪರಿಶೀಲಿಸಿದಾಗ ಅಂಗಡಿಯ ಹಿಂಬದಿಯ ತಗಡನ್ನು ಎತ್ತಿ ಒಳಗೆ ಬೆಂಕಿ ಹಾಕಿರುವುದು ಕಂಡು ಬಂದಿದೆ.
ಅಂಗಡಿಯಲ್ಲಿದ್ದ ಫ್ರಿಜ್, ವಿವಿಧ ಎಣ್ಣೆಗಳ ಪೆಟ್ಟಿಗೆಗಳು ಹಾಗೂ ಪ್ರತಿನಿತ್ಯ ಮಾರಾಟಕ್ಕೆ ಇಟ್ಟಿದ್ದ ಸಾಮಾಗ್ರಿಗಳು ಸುಟ್ಟು ಹೋಗಿ ಸುಮಾರು 2 ಲಕ್ಷ ರೂ. ನಷ್ಟ ಆಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.