ನವದೆಹಲಿ: ಭಾರತದ ರಾಜಧಾನಿ ದೆಹಲಿಯ ಆಗ್ನೇಯ ಭಾಗದ ತುಘಲಕಾಬಾದ್ ಪ್ರದೇಶದ ಕೊಳೆಗೇರಿಗಳಲ್ಲಿ ಮಂಗಳವಾರ (ಮೇ 26) ಮುಂಜಾನೆ 1 ಗಂಟೆ ಸುಮಾರಿಗೆ ಭಾರೀ ಬೆಂಕಿ ಅನಾಹುತ ಸಂಭವಿಸಿದ್ದು ಸುಮಾರು 1,5೦೦ ಕ್ಕೂ ಅಧಿಕ ಗುಡಿಸಲುಗಳು ಸುಟ್ಟುಹೋಗಿವೆ. ಬೆಂಕಿ ನಿಯಂತ್ರಿಸಲು ಕನಿಷ್ಠ 30 ಅಗ್ನಿಶಾಮಕ ಟೆಂಡರ್ಗಳನ್ನು ಸ್ಥಳಕ್ಕೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ.
ರಾತ್ರಿ 12:50ಕ್ಕೆ ಅಗ್ನಿ ಅನಾಹುತದ ಮಾಹಿತಿ ಪಡೆದ ಅಗ್ನಿ ಶಾಮಕ ದಳದ 30 ಯಂತ್ರಗಳು ಸ್ಥಳಕ್ಕೆ ಧಾವಿಸಿವೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಲಂ ನಿವಾಸಿಗಳು ಘಟನೆಯ ವೇಳೆ ನಿದ್ರೆಯಲ್ಲಿದ್ದರು. ಪೊಲೀಸರು ಹಾಗೂ ಅಗ್ನಿಶಾಮಕ ಅಧಿಕಾರಿಗಳು ಜನರನ್ನು ಎಬ್ಬಿಸಿ ಬೇರೆಡೆ ಸಾಗಿಸಲು ನೆರವಾದರು.
ಬೆಂಕಿಯನ್ನು ಬೆಳಗ್ಗೆ 3:40ಕ್ಕೆ ತಹಬದಿಗೆ ತರಲಾಗಿದ್ದು, ಆದರೆ, ಅಷ್ಟರೊಳಗೆ,ಸುಮಾರು 1,500 ಕ್ಕಿಂತಲೂ ಅಧಿಕ ಗುಡಿಸಲುಗಳು ಬೆಂಕಿಗಾಹುತಿಯಾಗಿದ್ದವು. ಹೀಗಾಗಿ ಹಲವು ಜನರು ಮನೆ ಕಳೆದುಕೊಂಡಿದ್ದಾರೆ. ಸರಕಾರವು ಇದೀಗ ನಷ್ಟದ ಅಂದಾಜು ನಡೆಸುತ್ತಿದೆ.
ತುಘಲಕ್ನಗರ ಪ್ರದೇಶದಲ್ಲಿರುವ ಸ್ಲಂಗಳಲ್ಲಿ ಬೆಂಕಿ ಕಾಣಿಸಿಕೊಂಡ ಮಾಹಿತಿಯು ನಮಗೆ ರಾತ್ರಿ 1 ಗಂಟೆಗೆ ತಲುಪಿತು. ಎಲ್ಲ ಪೊಲೀಸ್ ಸಿಬ್ಬಂದಿ ತಕ್ಷಣವೇ ಸ್ಥಳಕ್ಕೆ ತಲುಪಿದೆವು. ಸುಮಾರು 1ರಿಂದ 2 ಸಾವಿರ ಗುಡಿಸಲುಗಳಿಗೆ ಬೆಂಕಿ ತಗಲಿದೆ ಎಂದು ಆಗ್ನೇಯ ದಿಲ್ಲಿಯ ಪೊಲೀಸ್ ಉಪ ಆಯುಕ್ತ ರಾಜೇಂದ್ರ ಪ್ರಸಾದ್ ಮೀನಾ INA ಸುದ್ದಿಮಾದ್ಯಮಕ್ಕೆ ಹೇಳಿದ್ದಾರೆ.
ಬೆಂಕಿ ತಗಲಿದೆ ತಕ್ಷಣ ಹೆಚ್ಚಿನ ಜನರು ಗುಡಿಸಲಿನಿಂದ ಹೊರಬಂದಿದ್ದಾರೆ ಎಂದು ಸ್ಥಳೀಯರು ಹೇಳಿದ್ದಾರೆ. ಅಗ್ನಿಶಾಮಕದಳದ ಕಾರ್ಯಾಚರಣೆ ಮುಂದುವರಿದಿದ್ದು, ಈ ತನಕ ಸಾವು-ನೋವಿನ ವರದಿಯಾಗಿಲ್ಲ.