ಬೆಳ್ತಂಗಡಿ: ರಾಜ್ಯ ಯಾವುದು , ಊರು ಯಾವುದು ಎಂದು ನೆನಪಿಸಿಕೊಂಡು ಹೇಳುವ ಪರಿಸ್ಥಿತಿಯಲ್ಲಿಲ್ಲದ ಮಾನಸಿಕ ಅಸ್ವಸ್ಥನಾಗಿರುವ ವ್ಯಕ್ತಿಯೊಬ್ಬ ಕಳೆದ ಮೂರು ವರ್ಷಗಳಿಂದ ಬೆಳ್ತಂಗಡಿ ತಾಲೂಕಿನ ಸೋಮಂದಡ್ಕ ಹೊಟೇಲಿನಲ್ಲಿ ಆಶ್ರಯ ಪಡೆದುಕೊಂಡು ಹೊಟೇಲ್ ಕೆಲಸಗಳನ್ನು ಅಚ್ಚುಕಟ್ಟಾಗಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾನೆ. ಮಾನಸಿಕ ಅಸ್ವಸ್ಥನಾಗಿದ್ದರು ಹೊಟೇಲ್ ಗೆ ಬರುವ ಸಾರ್ವಜನಿಕರೊಂದಿಗೆ ಉತ್ತಮ ಸ್ನೇಹದಿಂದ ಒಡನಾಟವನ್ನು ಹೊಂದಿದ್ದಾನೆ.ಆದ್ರೆ ಇದೀಗ ಆತನ ಊರನ್ನು ಸಂಪರ್ಕ ಮಾಡಿ ಕುಟುಂಬಕ್ಕೆ ಸೇರಿಸಲು ಸ್ಥಳೀಯ ತಂಡವೊಂದು ಮುಂದಾಗಿದೆ.
ಘಟನೆ: ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ಸೋಮಂದಡ್ಕ ಬಸ್ ನಿಲ್ದಾಣದ ಹಿಂಭಾಗದಲ್ಲಿರುವ ಸಂಗಮ್ ಹೋಟೆಲಿನ ಮಾಲೀಕ ಅಬ್ದುಲ್ ಲತೀಫ್ ಅವರಿಗೆ ಕಳೆದ ಮೂರು ವರ್ಷಗಳ ಹಿಂದೆ ಸೋಮಂದಡ್ಕದಲ್ಲಿ ಪ್ರತಿದಿನ ತಿರುಗಾಡುತ್ತಿದ್ದವನನ್ನು ಗಮನಿಸಿದ ಬಸ್ ಚಾಲಕ ನಾರಾಯಣ ಪೂಜಾರಿ ಮಾಹಿತಿ ಮಾಡಿದ್ದರು. ಅದರಂತೆ ಅಬ್ದುಲ್ ಲತೀಫ್ ವ್ಯಕ್ತಿಯ ಬಳಿಗೆ ಬಂದು ವಿಚಾರಿಸಿದಾಗ ಯಾವುದೇ ರೀತಿಯ ಸರಿಯಾದ ಉತ್ತರ ಬರಲಿಲ್ಲ. ಬಳಿಕ ಅವನನ್ನು ಹೊಟೇಲ್ ಕರೆದುಕೊಂಡು ಬಂದು ರೂಂ ವ್ಯವಸ್ಥೆ ಮಾಡಿ ಪ್ರತಿದಿನ ಊಟ, ತಿಂಡಿ ನೀಡಿ ನೋಡಿಕೊಳ್ಳುತ್ತಿದ್ದರು. ನಂತರ ಪ್ರತಿದಿನ ಹೊಟೇಲ್ ನಲ್ಲಿ ಕೆಲಸ ಮಾಡಲು ಆರಂಭಿಸಿದ್ದ. ಇದಕ್ಕೆ ಅವರು ಆತನ ತಿಂಗಳ ಸಂಬಳವನ್ನು ಖಾತೆಯೊಂದನ್ನು ಮಾಡಿ ಹಣವನ್ನು ಪ್ರತಿ ತಿಂಗಳು ಹಾಕುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಆತನ ವರ್ತನೆಗಳಲ್ಲಿ ಬದಲಾವಣೆ ಬಂದಿರುವ ಕಾರಣ ಹೊಟೇಲ್ ಮಾಲೀಕ ಅಬ್ದುಲ್ ಲತೀಫ್ ಸ್ಥಳೀಯ ಸಮಾಜ ಸೇವಕ ಅಬ್ದುಲ್ ಅಜೀಜ್ ಅವರ ತಂಡದ ಸದಸ್ಯರಿಗೆ ಮಾಹಿತಿ ನೀಡಿ ಮರಳಿ ಕಳುಹಿಸಲು ಮಾಹಿತಿ ನೀಡಿದ್ದರು.
ಅದರಂತೆ ಆತನ ಊರಿನ ಬಗ್ಗೆ ವಿಚಾರಿಸಿದಾಗ ಅಲ್ವ ಸ್ವಲ್ಪ ಮಾತುಗಳನ್ನು ಮಾತಾನಾಡುತ್ತಿದ್ದಾನೆ. ಈ ವಿಚಾರವನ್ನು ಮಹಾಎಕ್ಸ್ ಪ್ರೆಸ್ ವೆಬ್ ಸೈಟ್ ಮಾಧ್ಯಮವನ್ನು ಸಂಪರ್ಕಿಸಿ ಆತನ ಬಗ್ಗೆ ವರದಿ ಪ್ರಸಾರ ಮಾಡಿ ಕುಟುಂಬ ಸದಸ್ಯರನ್ನು ಸೇರಿಸಲು ಮನವಿ ಮಾಡಿಕೊಂಡಿದ್ದಾರೆ.
ಜಾರ್ಖಂಡ್ ಮೂಲದ ವ್ಯಕ್ತಿ?: ಈತ ನಾನು ಜಾರ್ಖಂಡ್ ಮೂಲದ ಸೋನ್ ಬೋಗಿ ಎಂದು ಹೇಳುತ್ತಿದ್ದು ಸರಿಯಾದ ನೆನಪಿನ ಶಕ್ತಿ ಇಲ್ಲದಿರುವುದರಿಂದ ಆತನ ಊರಿನ ಬಗ್ಗೆ ಖಚಿತ ಪಡಿಸಲು ಅಸಾಧ್ಯವಾಗುತ್ತಿದೆ. ಆತನನ್ನು ವಿಚಾರಿಸಿದಾಗ ತಲಪುರ್ , ನೂರ್ದೆ ಎಂಬ ಹೆಸರನ್ನು ಮಾತ್ರ ಹೇಳುತ್ತಿದ್ದಾನೆ. ಮದುವೆಯಾಗಿ ಹೆಂಡತಿ ಮಕ್ಕಳಿದ್ದಾರೆ. ನನ್ನ ಅಣ್ಣ ಒಬ್ಬ ಸಂಗೀತಗಾರನಾಗಿದ್ದಾನೆ ಎನ್ನುವ ಮಾಹಿತಿ ನೀಡುತ್ತಾನೆ. ಆತ ನೀಡಿದ ಹೆಸರನ್ನು ಹೇಳುವ ಬಗ್ಗೆ ಮಹಾಎಕ್ಸ್ ಪ್ರೆಸ್ ತಂಡ ಜಾರ್ಖಂಡ್ ರಾಜ್ಯದ ಕೆಲವರನ್ನು ಸಂಪರ್ಕಿಸಿ ಕುಟುಂಬ ಸದಸ್ಯರ ಬಗ್ಗೆ ಮಾಹಿತಿ ಕಲೆ ಹಾಕಲು ಮಾಹಿತಿ ಹಂಚಿಕೊಳ್ಳುತ್ತಿದೆ.
ಹೋಟೆಲ್ ನಲ್ಲಿ ಕೆಲಸ: ಸಂಗಮ್ ಹೋಟೆಲಿಗೆ ಕರೆದುಕೊಂಡು ಬಂದ ಬಳಿಕ ಅಡುಗೆ ಕೆಲಸ ಮಾಡಲು ಕಲಿತಿದ್ದಾನೆ. ಅದಲ್ಲದೆ ಪಕ್ಕದ ಅಂಗಡಿಗೆ ಹೋಗಿ ವಸ್ತುಗಳನ್ನು ತಂದು ಹೊಟೇಲ್ ನಲ್ಲಿ ಇಡುತ್ತಾನೆ. ಹೊಟೇಲಿಗೆ ಬರುವ ಗ್ರಾಹಕರ ಜೊತೆ ಆತ್ಮೀಯವಾಗಿ ನಗುತ್ತಾ ಪಕ್ಕದಲ್ಲಿ ಕುಳಿತುಕೊಳ್ಳುತ್ತಾನೆ. ಕೆಲವರು ಈತನನ್ನು ತಮ್ಮನಂತೆ ಹೆಗಲಿಗೆ ಕೈಹಾಕಿಕೊಂಡು ನಗುತ್ತಾ ಮಾತಾನಾಡುತ್ತಾರೆ. ಯಾರಿಗೂ ಈವರೆಗೆ ಈತ ತೊಂದರೆಯನ್ನು ನೀಡಿಲ್ಲ ಎನ್ನುತ್ತಾರೆ ಹೊಟೇಲಿಗೆ ಬರುವ ಗ್ರಾಹಕರು.
ಮಂಗಳೂರು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ: ಈತನನ್ನು ಮಂಗಳೂರಿನ ಮಾನಸಿಕ ವೈದ್ಯರಾದ ಕಿರಣ್ ಕುಮಾರ್ ಬಳಿಗೆ ಫೆ.18 ರಂದು ಅಬ್ದುಲ್ ಲತೀಫ್ , ಅಬ್ದುಲ್ ಅಜೀಜ್ ಕಾರಿನಲ್ಲಿ ಕರೆದುಕೊಂಡು ಹೋಗಿ ವೈದ್ಯರು ಪರೀಕ್ಷಿಸಿದ್ದು. ಈತನಿಗೆ ಹತ್ತು ದಿನದ ಮೆಡಿಸಿನ್ ನೀಡಿದ್ದು ಈತನ ಮಾನಸಿಕ ರೋಗವನ್ನು ಶೀಘ್ರದಲ್ಲೇ ಪರಿಹರಿಸಿ ಮೊದಲಿನಂತೆ ಆರೋಗ್ಯವಂತನಾಗಿ ಮಾಡಲಾಗುವುದು ಎಂದು ಕಿರಣ್ ಕುಮಾರ್ ಭರವಸೆ ನೀಡಿದ್ದಾರೆ.
ಕುಟುಂಬಕ್ಕೆ ಸೇರಿಸಲು ಪ್ರಯತ್ನ: ಸಂಗಮ್ ಹೊಟೇಲ್ ಮಾಲೀಕ ಅಬ್ದುಲ್ ಲತೀಫ್ , ಸಮಾಜ ಸೇವಕ ಅಬ್ದುಲ್ ಅಜೀಜ್ , ಬಿ.ಎಮ್.ಹಂಝ, ಜಾಬೀರ್ , ನಾರಾಯಣ ಪೂಜಾರಿ, ಆಶ್ರಫ್ ಆಲಿಕುಂಞ ಹಾಗೂ ಮಾಧ್ಯಮ ತಂಡ ಆತನನ್ನು ಹೆತ್ತೂರಿಗೆ ಕಳುಹಿಸಲು ಶ್ರಮಿಸುತ್ತಿವೆ.
ಒರಿಸ್ಸಾ ಮೂಲದ ವ್ಯಕ್ತಿಯೊಬ್ಬನನ್ನು ಇದೇ ತಂಡ ಕುಟುಂಬ ಸೇರಿಸಿತ್ತು: 15 ವರ್ಷಗಳಿಂದ ಮಾನಸಿಕವಾಗಿ ತಿರುಗಡುತ್ತಿದ್ದ ಒರಿಸ್ಸಾ ಮೂಲದ ಪುರುಷೋತ್ತಮ ಎಂಬಾತ ಸೋಮಂದಡ್ಕದ ಸಂಗಮ್ ಹೊಟೇಲ್ ಬಳಿ ತಿರುಗಾಡುತ್ತಿದ್ದಾಗ ಆತನಿಗೂ ಅಬ್ದುಲ್ ಲತೀಫ್ ಆಶ್ರಯ ನೀಡಿ ಹೊಟೇಲ್ ನಲ್ಲಿ ಎರಡು ವರ್ಷ ಕೆಲಸ ಕೊಡಿಸಿ ಆತನ ಸಂಬಂಳವನ್ನು ಖಾತೆ ಮಾಡಿಸಿದ್ದರು ಕೊನೆಗೆ ಬಂಟ್ವಾಳ ಎಎಸ್ಪಿ ಯಾಗಿದ್ದ ರಾಹುಲ್ ಕುಮಾರ್ ಮೂಲಕ ಒರಿಸ್ಸಾ ಪೊಲೀಸರ ಮೂಲಕ ಕುಟುಂಬವನ್ನು ಸಂಪರ್ಕಿಸಿ ಮನೆಯವರನ್ನು ಪತ್ತೆ ಮಾಡಿ ಸೋಮಂದಡ್ಕಕ್ಕೆ ಕರೆಸಿಕೊಂಡು ಕುಟುಂಬದೊಂದಿಗೆ ದುಡಿದ ಹಣವನ್ನು ಕೂಡ ಕುಟುಂಬಕ್ಕೆ ನೀಡಿ ಕಳುಹಿಸಿಕೊಟ್ಟಿದ್ದರು.
ಮಾಹಿತಿ ಪತ್ತೆಯಾದಲ್ಲಿ ಸಂಪರ್ಕಿಸಿ: ಈ ವ್ಯಕ್ತಿಯ ಬಗ್ಗೆ ಕುಟುಂಬದ ಮಾಹಿತಿ ಯಾರಿಗಾದರೂ ಪತ್ತೆಯಾದಲ್ಲಿ ಹೊಟೇಲ್ ಮಾಲೀಕ ಅಬ್ದುಲ್ ಲತೀಫ್ 9972989032, ಜಾಬೀರ್ 9632887741, ನಾರಾಯಣ ಪೂಜಾರಿ 9481755272 ಇವರನ್ನು ಸಂಪರ್ಕಿಸಬಹುದಾಗಿದೆ.