Friday, June 27, 2025
Homeಅಪರಾಧಪತ್ನಿಯ ದುಂದು ವೆಚ್ಚದಿಂದ ಬೇಸತ್ತು ಆಕೆಯನ್ನೇ ಕೊಲ್ಲಲು ಸುಪಾರಿ ಕೊಟ್ಟ ಗಂಡ

ಪತ್ನಿಯ ದುಂದು ವೆಚ್ಚದಿಂದ ಬೇಸತ್ತು ಆಕೆಯನ್ನೇ ಕೊಲ್ಲಲು ಸುಪಾರಿ ಕೊಟ್ಟ ಗಂಡ

spot_img
- Advertisement -
- Advertisement -

ಗ್ವಾಲಿಯರ್:‌ ವ್ಯಕ್ತಿಯೊಬ್ಬ ಪತ್ನಿಯ ಅತಿಯಾದ ಖರ್ಚಿನಿಂದ ಬೇಸತ್ತು, ಆಕೆಯ ಹತ್ಯೆಗೆ ಸುಪಾರಿ ನೀಡಿದ ಘಟನೆ ಮಧ್ಯಪ್ರದೇಶದ ಗ್ವಾಲಿಯರ್‌ ನಲ್ಲಿ ಇತ್ತೀಚೆಗೆ ನಡೆದಿದೆ.

ಕೊಲೆ ಆರೋಪಿ ಪತಿ ಹೇಮಂತ್‌ ಶರ್ಮಾ. ಈತ ದುಂದು ವೆಚ್ಚ ಮಾಡುತ್ತಿದ್ದ ಪತ್ನಿಯ ಕೊಲೆಗೆ ಸ್ನೇಹಿತರಿಗೆ 2.5 ಲಕ್ಷ ರೂ ನೀಡಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಹತ್ಯೆಯನ್ನು ರಸ್ತೆ ಅಪಘಾತದಂತೆ ಬಿಂಬಿಸಲಾಗಿದ್ದು, ಈ ಘಟನೆ ಆಗಸ್ಟ್‌ 13ರಂದು ನಡೆದಿದ್ದು, ಘಟನೆಯ ಅಸಲಿಯತ್ತು ಹತ್ತು ದಿನಗಳ ಬಳಿಕ ಹೊರಬಿದ್ದಿದೆ.

ಘಟನೆಯ ಕುರಿತು ಆರಂಭದಲ್ಲಿ ಇದು ಒಂದು ಹಿಟ್‌ ಆಂಡ್‌ ರನ್‌ ಕೇಸು ಎಂದು ಹೇಮಂತ್‌ ಶರ್ಮಾ ಕೇಸು ದಾಖಲಿಸಿದ್ದರು. ಲೋಡಿಂಗ್‌ ವಾಹನವೊಂದು ಡಿಕ್ಕಿ ಹೊಡೆದಿದೆ ಎಂದು ಹೇಳಿದ್ದರು. ಆದರೆ ಹೇಮಂತ್‌ ಶರ್ಮಾ ಅವರ ಹೇಳಿಕೆಯಲ್ಲಿನ ವ್ಯತ್ಯಾಸಗಳು ಮತ್ತು ಆ ಪ್ರದೇಶದ ಸಿಸಿಟಿವಿ ದೃಶ್ಯಗಳಲ್ಲಿ ಅಂತಹ ವಾಹನದ ಪುರಾವೆ ಇಲ್ಲದಿರುವುದು ಪೊಲೀಸರಿಗೆ ಅನುಮಾನಗಳನ್ನು ಹುಟ್ಟುಹಾಕಿದೆ. ಹೆಚ್ಚಿನ ತನಿಖೆಯ ವೇಳೆ ಅಪಘಾತಕ್ಕೆ ಸ್ವಲ್ಪ ಮೊದಲು ಬೈಕ್‌ ಹಿಂದೆ ಇಕೋಸ್ಪೋರ್ಟ್ ಕಾರು ಇರುವುದು ಕಂಡು ಬಂದಿತ್ತು. ಶರ್ಮಾ ಅವರ ವೈಯಕ್ತಿಕ ಜೀವನವನ್ನು ಮತ್ತಷ್ಟು ತನಿಖೆ ಮಾಡಲು ಇದು ಪೊಲೀಸರನ್ನು ಪ್ರೇರೇಪಿಸಿತು. 

ಇನ್ನು ಪೊಲೀಸರು ಹೇಳುವಂತೆ, ಶರ್ಮಾ ಅವರು ಈ ಕೊಲೆಯನ್ನು ರಸ್ತೆ ಅಪಘಾತದಂತೆ ಕಾಣುವಂತೆ ಮಾಡಿದ್ದಾರೆ. ಘಟನೆ ದಿನದಂದು ಶರ್ಮಾ ತನ್ನ ಪತ್ನಿ ದುರ್ಗಾವತಿ ಮತ್ತು ಆಕೆಯ ಸಹೋದರ ಸಂದೇಶ್ ಅವರನ್ನು ದೇವಸ್ಥಾನಕ್ಕೆ ಕರೆದೊಯ್ದರು. ವಾಪಸಾಗುತ್ತಿದ್ದಾಗ ಶರ್ಮಾ ಅವರ ಸಹಚರರೊಬ್ಬರು ಚಲಾಯಿಸುತ್ತಿದ್ದ ಇಕೋಸ್ಪೋರ್ಟ್ ಕಾರು ದುರ್ಗಾವತಿ ಮತ್ತು ಸಂದೇಶ್ ಪ್ರಯಾಣಿಸುತ್ತಿದ್ದ ಮೋಟಾರ್ ಬೈಕ್‌ ಗೆ ಉದ್ದೇಶಪೂರ್ವಕವಾಗಿ ಡಿಕ್ಕಿ ಹೊಡೆದಿದೆ. ಘಟನೆಯ ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ದುರ್ಗಾವತಿ ಅವರು ಬಳಿಕ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಸಂದೇಶ್‌ ಅವರು ಬಳಿಕ ಚೇತರಿಸಿಕೊಂಡಿದ್ದಾರೆ.

ಹೇಮಂತ್ ಶರ್ಮಾ ಹಾಗೂ ದುರ್ಗಾವತಿ ಅವರಿಬ್ಬರಿಗೂ ಇದು ಎರಡನೇ ಮದುವೆಯಾಗಿದ್ದು, ಇವರಿಬ್ಬರು 2023 ರಲ್ಲಿ ನ್ಯಾಯಾಲಯದಲ್ಲಿ ವಿವಾಹವಾದರು. ದುರ್ಗಾವತಿಯ ದುಂದುವೆಚ್ಚವೇ ವಿವಾಹದಲ್ಲಿ ಬಿರುಕು ಮೂಡಲು ಕಾರಣ ಎನ್ನಲಾಗಿದೆ. ಆಕೆಯ ಅತಿ ವೆಚ್ಚದ ಕಾರಣದಿಂದ ಶರ್ಮಾಗೆ ಹಣಕಾಸಿನ ತೊಂದರೆ ಉಂಟಾಗುತ್ತಿತ್ತು. ಇದರಿಂದ ರೋಸಿಹೋದ ಶರ್ಮಾ ಪತ್ನಿಯ ಕೊಲೆಗೆ ಯೋಜನೆ ರೂಪಿಸಿದ್ದ.

ಪೊಲೀಸರು ಹೇಮಂತ್‌ ಶರ್ಮಾ, ಕಾರು ಡ್ರೈವರ್‌ ಮತ್ತು ಸಹಾಯ ಮಾಡಿದ್ದ ಇಬ್ಬರನ್ನು ಬಂಧಿಸಿದ್ದಾರೆ.

- Advertisement -
spot_img

Latest News

error: Content is protected !!