ಮಂಗಳೂರು : ಫಾಝಿಲ್ ಹತ್ಯೆ ಪ್ರಕರಣದ ಮೂವರು ಆರೋಪಿಗಳಿಗೆ ಜಾಮೀನು ಮಂಜೂರಾಗಿದೆ. ಜೈಲಿನಲ್ಲಿದ್ದ ಮೂವರು ಪ್ರಮುಖ ಆರೋಪಿಗಳಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಸುರತ್ಕಲ್ ಪೊಲೀಸರು ಈ ಮೂವರನ್ನು ಎ1, ಎ2, ಎ3 ಆರೋಪಿಗಳೆಂದು ಗುರುತಿಸಿ ಮಂಗಳೂರು ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ಪ್ರಮುಖ ಆರೋಪಿಗಳಾದ ಬಂಟ್ವಾಳ ತಾಲೂಕಿನ ಕಾವಳಮಾಡೂರು ಗ್ರಾಮದ ಸುಹೇಲ್ ಶೆಟ್ಟಿ ಅಲಿಯಾಸ್ ಸುಭಾಷ್, ಕಾಟಿಪಳ್ಳ 3ನೇ ಬ್ಲಾಕ್ ನಿವಾಸಿ ಅಭಿಷೇಕ್ , ಕುಳಾಯಿ ನಿವಾಸಿ ಮೋಹನ್ ಸಿಂಗ್ ಗೆ ಹೈಕೋರ್ಟ್ ಜಾಮೀನು ನೀಡಿದೆ.
2022ರ ಜುಲೈ 28ರಂದು ಮಂಗಳೂರಿನ ಸುರತ್ಕಲ್ನಲ್ಲಿರುವ ಬೀ ಜೇ ಬಟ್ಟೆ ಅಂಗಡಿಯಲ್ಲಿ 23 ವರ್ಷದ ಮೊಹಮ್ಮದ್ ಫಾಝಿಲ್ ಎಂಬಾತನನ್ನು ನಾಲ್ವರು ಮುಸುಕುಧಾರಿಗಳ ತಂಡ ಕಡಿದು ಹತ್ಯೆ ಮಾಡಿತ್ತು. ಬೆಳ್ಳಾರೆ ಗ್ರಾಮದಲ್ಲಿ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು (32) ಹತ್ಯೆಗೆ ಸಂಬಂಧಿಸಿದಂತೆ ದಕ್ಷಿಣ ಕನ್ನಡದಲ್ಲಿ ಉದ್ವಿಗ್ನತೆಯ ನಡುವೆ ಈ ಕೊಲೆ ನಡೆದಿದೆ. ಒಟ್ಟು 8 ಆರೋಪಿಗಳನ್ನು ಸುರತ್ಕಲ್ ಪೊಲೀಸರು ಬಂಧಿಸಿದ್ದರು.. ಈ ಪೈಕಿ ಐವರು ಈಗಾಗಲೇ ಜಾಮೀನು ಪಡೆದಿದ್ದಾರೆ.