ಸುಳ್ಯ; ಕೋಳಿ ಸಾರಿನ ವಿಚಾರಕ್ಕೆ ಅಪ್ಪ ಮಗನ ನಡುವೆ ಗಲಾಟೆ ನಡೆದು ಅದು ಮಗನ ಸಾವಿನಲ್ಲಿ ಅಂತ್ಯವಾದ ಘಟನೆ ನಿನ್ನೆ ರಾತ್ರಿ ಗುತ್ತಿಗಾರು ಗ್ರಾಮದ ಮೊಗ್ರ ಏರಣಗುಡ್ಡೆ ಬಳಿ ನಡೆದಿದೆ.ಶಿವರಾಮ ಮೃತ ದುರ್ದೈವಿ. ತಂದೆ ಶೀನ ಕೊಲೆ ಮಾಡಿದ ಆರೋಪಿ.
ಮೊಗ್ರ ಏರಣಗುಡ್ಡೆಯ ಮಾತೃ ಮಜಲು ನಿವಾಸಿ ಶೀನ ಎಂಬವರಿಗೂ ಅವರ ಮಗ ಶಿವರಾಮ ಎಂಬವರಿಗೂ ನಿನ್ನೆ ರಾತ್ರಿ 12 ಗಂಟೆಗೆ ಕೋಳಿ ಸಾರಿನ ವಿಚಾರವಾಗಿ ಜಗಳ ಶುರುವಾಗಿದೆ. ಶಿವರಾಮ ರಾತ್ರಿ ಮನೆಗೆ ಬರುವಾಗ ಕೋಳಿ ಪದಾರ್ಥ ಖಾಲಿ ಆಗಿತ್ತೆನ್ನಲಾಗಿದೆ. ಇದನ್ನು ಕೋಪಗೊಂಡು ಶಿವರಾಮ ಮಾತನಾಡುತ್ತಿದ್ದು ಅಪ್ಪ ಮಗನ ಮಧ್ಯೆ ಜಗಳಕ್ಕೆ ಕಾರಣವಾಗಿದೆ. ಈ ವೇಳೆ ತಂದೆ ಶೀನ ಬಡಿಗೆಯಿಂದ ಮಗನ ತಲೆಗೆ ಹೊಡೆದಿದ್ದಾರೆ. ಇದರಿಂದಾಗಿ ತಲೆಗೆ ಗಂಭೀರವಾಗ ಗಾಯವಾಗಿ ಶಿವರಾಮ ಸ್ಥಳದಲ್ಲಿ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ವಿಷಯ ತಿಳಿದು ಸುಬ್ರಹ್ಮಣ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿ ಶೀನರನ್ನು ಬಂಧಿಸಿದ್ದಾರೆ. ಶಿವರಾಮರ ಮೃತ ದೇಹವನ್ನು ಕಡಬ ಆಸ್ಪತ್ರೆಗೆ ಕೊಂಡಯ್ಯಲಾಗಿದೆ.ಶಿವರಾಮರು (32ವರ್ಷ) ಕೂಲಿ ಕೆಲಸಕ್ಕೆ ಹೋಗುತ್ತಿದ್ದು, ಪತ್ನಿ ಮತ್ತು ಇಬ್ಬರು ಪುಟ್ಟ ಮಕ್ಕಳನ್ನು ಅಗಲಿದ್ದಾರೆ.