ಉಡುಪಿ: ಮಣಿಪಾಲದ ಸರಳೇಬೆಟ್ಟು ಬಳಿಯಲ್ಲಿ ಯುವಕನೋರ್ವನನ್ನು ಅಟ್ಟಾಡಿಸಿ 6 ಮಂದಿಯ ತಂಡವೊಂದು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಹಲ್ಲೆಗೊಳಗಾದ ಯುವಕ ಮುಂಬಯಿ ಮೂಲದ ಆರುಶ್ ಕುಮಾರ್ (21). ಯುವಕನ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.
ಯುವಕರ ತಂಡವೊಂದು ರೆಸ್ಟೋರೆಂಟ್ನಲ್ಲಿನಲ್ಲಿದ್ದ ವೇಳೆ ಆ ತಂಡದ ಓರ್ವನಿಗೆ ಆರುಶ್ ಕುಮಾರ್ನ ಕಾಲು ತಾಗಿತ್ತು. ಈ ಹಿನ್ನೆಲೆಯಲ್ಲಿ ತಗಾದೆ ತೆಗೆದ ಯುವಕರ ತಂಡ ರೆಸ್ಟೋರೆಂಟ್ನಲ್ಲಿ ಹಲ್ಲೆ ನಡೆಸಿದೆ. ಮಾತ್ರವಲ್ಲದೆ ಆರುಶ್ ವಾಸಿಸುತ್ತಿದ್ದ ಅಪಾರ್ಟ್ಮೆಂಟ್ವರೆಗೆ ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಆರುಶ್ ಒಬ್ಬನೇ ಅಪಾರ್ಟ್ಮೆಂಟ್ನಲ್ಲಿ ವಾಸಿಸುತ್ತಿದ್ದು, ಯುವಕರ ತಂಡ ಆತನ ಕೊಠಡಿಯವರೆಗೆ ಅಟ್ಟಾಡಿಸಿಕೊಂಡು ಹೋಗಿದ್ದರು. ಆತನನ್ನು ಕೊಠಡಿಯೊಳಗೆ ಹೋಗಲು ಬಿಡದೆ ಆತನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ವಿಚಾರ ತಿಳಿದ ಆರುಶ್ ಸ್ನೇಹಿತರು ಆತನನ್ನು ರಕ್ಷಿಸಲು ಬಂದಿದ್ದಾರೆ. ಆ ಬಳಿಕ ಯುವಕರ ತಂಡ ಆರುಶ್ಗೆ ಮತ್ತೊಮ್ಮೆ ಹಲ್ಲೆ ನಡೆಸುವುದಾಗಿ ಬೆದರಿಕೆ ಹಾಕಿದೆ. ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಿಸಿ ಟಿವಿ ಹಾಗೂ ಯುವಕರ ಮೊಬೈಲ್ ಸಂಖ್ಯೆ ಆಧಾರದ ಮೇಲೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
ಆರು ಮಂದಿ ವಶಕ್ಕೆ
ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಗಳಾದ ರಿಷಿತ್, ಗಗನ್, ದಿಲೀಪ್, ತನಿಷ್, ಅಂಕಿತ್ ಮತ್ತು ಓರ್ವ ಬಾಲಕನನ್ನು ವಶಕ್ಕೆ ಪಡೆಯಲಾಗಿದ್ದು, ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಎಸ್ಪಿ ಡಾ| ಕೆ. ಅರುಣ್ ತಿಳಿಸಿದ್ದಾರೆ