Tuesday, July 1, 2025
Homeಕರಾವಳಿಹರೀಶ್ ಪೂಂಜಾರವರು ನೀಡಿದ ಅನುದಾನ ಲೆಕ್ಕದಲ್ಲಿ 368.5 ಕೋಟಿ ರೂ. ವ್ಯತ್ಯಾಸ:ಬಹಿರಂಗ ಚರ್ಚೆಗೆ ಆಹ್ವಾನಿಸಿದ ಮಾಜಿ...

ಹರೀಶ್ ಪೂಂಜಾರವರು ನೀಡಿದ ಅನುದಾನ ಲೆಕ್ಕದಲ್ಲಿ 368.5 ಕೋಟಿ ರೂ. ವ್ಯತ್ಯಾಸ:ಬಹಿರಂಗ ಚರ್ಚೆಗೆ ಆಹ್ವಾನಿಸಿದ ಮಾಜಿ ಶಾಸಕ ವಸಂತ ಬಂಗೇರ

spot_img
- Advertisement -
- Advertisement -

ಬೆಳ್ತಂಗಡಿ: ಶಾಸಕ ಹರೀಶ್ ಪೂಂಜರವರು 3 ವರ್ಷಗಳಲ್ಲಿ ಬೆಳ್ತಂಗಡಿ ಕ್ಷೇತ್ರಕ್ಕೆ 833.69 ರೂ.ಕೋಟಿ ಅನುದಾನ ತಂದಿರುವುದಾಗಿ ಹೇಳಿದ್ದು, ಇದೀಗ ಅವರು ಪತ್ರಿಕೆಯಲ್ಲಿ ಪ್ರಕಟಿಸಿದ 20 ಇಲಾಖೆಗಳ ಮುಖ್ಯಸ್ಥರನ್ನು ಸಂಪರ್ಕಿಸಿ ದಾಖಲೆಗಳನ್ನು ಸಂಗ್ರಹಿಸಿದಾಗ ಬರಿ 368.5 ಕೋಟಿ ರೂ. ವ್ಯತ್ಯಾಸ ಬರುವ ಮೂಲಕ ಜನತೆಗೆ ತಪ್ಪಾದ ಲೆಕ್ಕ ಕೊಟ್ಟಿದ್ದಾರೆ ಹಾಗೂ ಈ ಬಗ್ಗೆ ನಾನು ಅವರನ್ನು ಬಹಿರಂಗ ಚರ್ಚೆಗೆ ಆಹ್ವಾನಿಸುತ್ತಿದ್ದು ಪತ್ರಕರ್ತರ ಸಮಕ್ಷಮ ಶಾಸಕರು ನಿಗದಿಗೊಳಿಸಿದ ದಿನ ಅಧಿಕಾರಿಗಳನ್ನು ಕರೆದುಕೊಂಡು ಅವರು ನೀಡಿದ ಲೆಕ್ಕದ ಚರ್ಚೆಗೆ ಎಲ್ಲಿಗೆ ಕರೆದರೂ ನಾನು ಬರಲು ಸಿದ್ದನಿದ್ದೇನೆ ಎಂದು ಮಾಜಿ ಶಾಸಕ ವಸಂತ ಬಂಗೇರ ಹರೀಶ್ ಪೂಂಜಾರವರಿಗೆ ಸವಾಲೆಸೆದಿದ್ದಾರೆ.

ಬೆಳ್ತಂಗಡಿ ಸರಕಾರಿ ಪ್ರವಾಸಿ ಬಂಗಲೆಯಲ್ಲಿ ಮಂಗಳವಾರ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರು ಪ್ರಕಟಿಸಿದ 20 ಇಲಾಖೆಗಳ ಲೆಕ್ಕಗಳನ್ನು ಪರಿಶೀಲಿಸಿದಾಗ ಅದರಲ್ಲಿ ಕೆಲವು ಕಾಮಗಾರಿಗಳು ನನ್ನ ಅವಧಿಯಲ್ಲಿ ಮಂಜೂರಾದುದು ಸಹ ಸೇರಿದೆ . ಅಲ್ಲದೆ ಕೆಲ ಲೆಕ್ಕವನ್ನು ಎರಡೆರಡು ಇಲಾಖೆಗಳ ಕಾಮಗಾರಿಗಳ ಪಟ್ಟಿಯಲ್ಲಿ ತೋರಿಸಿ ಜನತೆಗೆ ತಪ್ಪು ಮಾಹಿತಿ ನೀಡಿದ್ದಾರೆ.

ಪಟ್ಟಣ ಪಂಚಾಯತ್‌ಗೆ ನನ್ನ ಶಾಸಕತ್ವದ ಕಾಮಗಾರಿ 10 ಕೋಟಿ ರೂ. ಅನುದಾನವನ್ನು ಕೆ.ಆರ್.ಐ.ಡಿಎಲ್‌ನ ಲೆಕ್ಕದಲ್ಲೂ ತೋರಿಸಿರುತ್ತಾರೆ. ಸಮಾಜ ಕಲ್ಯಾಣ ಇಲಾಖೆಗೆ ನನ್ನ ಶಾಸಕತ್ವದ ಅವಧಿಯಲ್ಲಿ ಮಂಜೂರಾದ 5 ಕೋಟಿ ಅನುದಾನವನ್ನು ಕೆ.ಆರ್.ಐ.ಡಿ.ಎಲ್‌ನ ಲೆಕ್ಕದಲ್ಲೂ ತೋರಿಸಿದ್ದಾರೆ.

ಕಂದಾಯ ಇಲಾಖೆಗೆ ಈ ಬಾರಿ ಮಂಜೂರಾದ 35 ಲಕ್ಷ ರೂ. ಅನುದಾನವನ್ನು ನಿರ್ಮಿತಿ ಕೇಂದ್ರದ ಲೆಕ್ಕದಲ್ಲೂ ತೋರಿಸಿದ್ದಲ್ಲದೆ, ಶಾಸಕರು ಕೊಟ್ಟಿರುವ 20 ಇಲಾಖೆಗಳ ಲೆಕ್ಕದಲ್ಲಿ ಹೆಚ್ಚಿನ ಅನುದಾನಗಳು ಶಾಸಕರ ವಿಶೇಷ ಅನುದಾನಗಳಾಗಿರುವುದಿಲ್ಲ . ಅವುಗಳು ವಾರ್ಷಿಕವಾಗಿ ಇಲಾಖೆಗಳಿಗೆ ಸರಕಾರದಿಂದ ಬರುವಂತಹ ನಿಯತ ಅನುದಾನಗಳಾಗಿರುತ್ತವೆ . ಅದೇ ರೀತಿ ಶಾಸಕರು ಇಲಾಖಾವಾರು ಲೆಕ್ಕದಲ್ಲಿ ಕೆಲ ಇಲಾಖೆಗಳಲ್ಲಿ ಹೊರಗುತ್ತಿಗೆ ನೌಕರರಾಗಿ ಕೆಲಸ ಮಾಡುತ್ತಿರುವ
ಸಿಬ್ಬಂದಿಗಳ ಸಂಬಳ, ಗ್ರಾಮ ಪಂಚಾಯತ್‌ಗಳು ಅನುಷ್ಠಾನಗೊಳಿಸಿದ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿಕೂಲಿ ಪಾವತಿಯ ಲೆಕ್ಕ , ಕೆಲವೊಂದು ಇಲಾಖೆಗಳಲ್ಲಿ ವ್ಯಯಿಸಿದ ವಾಹನ ಭತ್ಯೆ , ಮೀಟಿಂಗ್ ಸಂದರ್ಭದಲ್ಲಿ ತರಿಸಿದ ಊಟ , ಉಪಹಾರದ ಖರ್ಚು ವೆಚ್ಚಗಳು ಸಹ ಸೇರಿದೆ. ತೋಟಗಾರಿಕೆ, ಕೃಷಿ ಇಲಾಖೆಯಲ್ಲಿ ದುಡಿಯುತ್ತಿರುವ ಹೊರಗುತ್ತಿಗೆ ನೌಕರರ ಸಂಬಳ ಕೂಡ ಸೇರಿದೆ. ಅಲ್ಲದೆ ವಿಶೇಷವಾಗಿ ರೈತರಿಗೆ ತರಬೇತಿ ನೀಡಿದ ವೇಳೆ ಉಪಹಾರ , ರೈತರ ಅಧ್ಯಯನ ಪ್ರವಾಸದ ಖರ್ಚು ವೆಚ್ಚ ಕೂಡ ಸೇರಿದೆ ಎಂದು ಹೇಳಿದ್ದಾರೆ.

ಈ ಎಲ್ಲಾ ದಾಖಲೆಗಳು ನನ್ನ ಬಳಿ ಇದ್ದು ಶಾಸಕರಾದ ಹರೀಶ್ ಪೂಂಜರವರು ಅಪೇಕ್ಷಿಸಿದಲ್ಲಿ ಪ್ರತಿಗಳನ್ನು ಅವರ ಕಛೇರಿಗೆ ತಲುಪಿಸಲು ಬದ್ದನಾಗಿರುತ್ತೇನೆ. ನಾನು ಶಾಸಕರ ಈ ಕೋಟಿ ಲೆಕ್ಕದ ಬಗ್ಗೆ ಸದ್ರಿ 20 ಇಲಾಖೆಗಳ ಮುಖ್ಯಸ್ಥರನ್ನು ಸಂಪರ್ಕಿಸಿದಾಗ ಅವರು ಪ್ರಾಮಾಣಿಕವಾಗಿ ಅವುಗಳಲ್ಲಿ ನಾನು ಶಾಸಕನಾಗಿದ್ದ ಕಾಲದ ಅನುದಾನ ಕೂಡ ಸೇರ್ಪಡೆಗೊಂಡಿದೆ. ಅದೇ ರೀತಿ ಶಾಸಕರು ಕೊಟ್ಟ ಲೆಕ್ಕದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯರಾದ ಐವನ್ ಡಿ ಸೋಜಾ , ಹಾಲಿ ವಿಧಾನ ಪರಿಷತ್ ಸದಸ್ಯರು , ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ . ಹರೀಶ್‌ ಕುಮಾರ್ ರವರ ಅನುದಾನಗಳು ಕೂಡ ಸೇರಿದೆ. ಆದ್ದರಿಂದ ನಾನು ಈ ಮೂಲಕ ಶಾಸಕ ಹರೀಶ್ ಪೂಂಜಾರವರನ್ನು ಬಹಿರಂಗವಾಗಿ ಚರ್ಚೆಗೆ ಆಹ್ವಾನಿಸುತ್ತಿದ್ದೇನೆ. ಒಂದು ವೇಳೆ ಅವರು 833.69 ರೂ.ಕೋಟಿ ಅವರೇ ತರಿಸಿದ್ದು ಎನ್ನುವ ಬಗ್ಗೆ ದಾಖಲೆಗಳನ್ನು ನೀಡಿದಲ್ಲಿ ಅಲ್ಲಿಯೇ ಅವರನ್ನು ತಾಲೂಕಿನ ಜನರೆಯ ಪರವಾಗಿ ಅಲ್ಲಿಯೇ ಅಭಿನಂದಿಸಲು ನಾನು ಬದ್ಧನಾಗಿರುತ್ತೇನೆ ಎಂದರು.

ಪಕ್ಷದ ವಕ್ತಾರ, ನ್ಯಾಯವಾದಿ ಮನೋಹರ್ ಕುಮಾರ್ ಇಳಂತಿಲ ಮತ್ತು ಜಿ.ಪಂ ಮಾಜಿ ಸದಸ್ಯ ಶೇಖರ್ ಕುಕ್ಕೇಡಿ ಅವರು ಇಲಖಾವಾರು ವಿವರ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಉಭಯ ಘಟಕಗಳ ಅಧ್ಯಕ್ಷರುಗಳಾದ ಶೈಲೇಶ್ ಕುಮಾರ್ ಕುರ್ತೋಡಿ ಮತ್ತು ರಂಜನ್ ಜಿ ಗೌಡ, ಕೆಪಿಸಿಸಿ ಕಾರ್ಮಿಕ ಘಟಕದ ರಾಜ್ಯ ಕಾರ್ಯದರ್ಶಿ ಅಬ್ದುಲ್ ರಹಿಮಾನ್ ಪಡ್ಪು, ತಾ.ಪಂ ಮಾಜಿ ಅಧ್ಯಕ್ಷೆ ದಿವ್ಯಜ್ಯೋತಿ, ತಾ.ಪಂ ಮಾಜಿ ಸದಸ್ಯರುಗಳಾದ ಓಬಯ್ಯ, ಜಯರಾಮ ಆಲಂಗಾರು, ಪ್ರವೀಣ್ , ಜಯಶೀಲಾ ಮತ್ತು ಸುಶೀಲಾ, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅಭಿನಂದನ್ ಹರೀಶ್, ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸತೀಶ್, ಸಾಮಾಜಿಕ ಜಾಲತಾಣ ಸಂಚಾಲಕ ಸಂದೀಪ್ ಎಸ್.ಎನ್ ಅರ್ವ ಮೊದಲಾದವರು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!