ಉಳ್ಳಾಲ:ಕಾಸರಗೋಡು ಜಿಲ್ಲೆಯಿಂದ ಮಂಗಳೂರು ಪ್ರವೇಶಕ್ಕೆ ನಕಲಿ ಆರ್ ಟಿಪಿಸಿಆರ್ ನೆಗೆಟಿವ್ ವರದಿ ತಂದಿದ್ದ ನಾಲ್ವರನ್ನು ಉಳ್ಳಾಲ ಪೊಲೀಸರು ಗುರುವಾರ ತಲಪಾಡಿಯಲ್ಲಿ ಬಂಧಿಸಿದ್ದಾರೆ.
ಇನ್ನೋವಾ ಕಾರಲ್ಲಿ ಆಗಮಿಸಿದ್ದ ಕಾಸರಗೋಡು ಜಿಲ್ಲೆಯ ಚೆರ್ವತ್ತೂರು ನಿವಾಸಿ ಆದಿಲ್ (25) ಮತ್ತು ಕಡಪುರ ನಿವಾಸಿ ಇಸ್ಮಾಯಿಲ್(48) ಹಾಗೂ ಬೈಕ್ ಮೂಲಕ ಬಂದು ಗಡಿ ಪ್ರವೇಶ ಮಾಡಿದ್ದ ಕಾಸರಗೋಡು, ಚೆರ್ವತ್ತೂರು ನಿವಾಸಿ ಹನೀನ್ (31) ಮತ್ತು ಬಸ್ ಮೂಲಕ ಬಂದಿದ್ದ ಚೆಂಗಳ ನಿವಾಸಿ ಅಬ್ದುಲ್ ತಮೀಮ್ (19) ನನ್ನ ಉಳ್ಳಾಲ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.
ಬಂಧಿತರ ವಿರುದ್ಧ ಉಳ್ಳಾಲ ಪೊಲೀಸರು ಎಪಿಡಮಿಕ್ ಆಕ್ಟ್, ವಂಚನೆ, ಫೋರ್ಜರಿ ಪ್ರಕರಣ ದಾಖಲಿಸಿದ್ದಾರೆ. ಆರ್ ಟಿಪಿಸಿಆರ್ ಪರೀಕ್ಷೆ ವರದಿಯ ಮಾದರಿಯಲ್ಲೇ ನಕಲಿ ಪ್ರಮಾಣ ಪತ್ರ ಮಾಡಿಸಿಕೊಂಡು ಇವರು ಕರ್ನಾಟಕ ಪ್ರವೇಶ ಮಾಡಿದ್ದರು. ತಲಪಾಡಿ ಗಡಿಯಲ್ಲಿ ವರದಿಯನ್ನು ಪರಿಶೀಲನೆ ನಡೆಸಿದಾಗ, ವರದಿ ನಕಲಿ ಎಂಬುದು ಕಂಡುಬಂದಿದೆ.
ಕೇರಳದಿಂದ ಬರುವಾಗ ಆರ್ ಟಿಪಿಸಿಆರ್ ನೆಗೆಟಿವ್ ವರದಿ ಹೊಂದಿದವರಿಗೆ ದಕ್ಷಿಣ ಕನ್ನಡ ಜಿಲ್ಲೆ ಬಂದ ನಂತರ ಕೋವಿಡ್-19 ದೃಢವಾಗುತ್ತಿದೆ. ಹೀಗಾಗಿ ಆರ್ ಟಿಪಿಸಿಆರ್ ನೆಗೆಟಿವ್ ವರದಿಯ ದೃಢತೆಯನ್ನು ಪರೀಕ್ಷಿಸಲು ದಕ್ಷಿಣಕನ್ನಡ ಜಿಲ್ಲಾಡಳಿತ ಮುಂದಾಗಿದೆ.