ಕಾರ್ಕಳ: ಪಿಯು ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂದು ಮಹಿಳೆ ಯೊಬ್ಬರು ಕಾರ್ಕಳದ ಬೆಳ್ಮಣ್ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಿಗೆ ಹುಸಿ ಕರೆ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾಲೇಜಿನ ಪ್ರಾಂಶುಪಾಲ ವಿಷ್ಣುಮೂರ್ತಿ ಮಯ್ಯ ಎಂಬವರ ಮೊಬೈಲ್ಗೆ ಮಹಿಳೆಯೊಬ್ಬರು ಮಾ.30 ರಂದು ಕರೆ ಮಾಡಿ, ತಾನು ಪಿ.ಯು. ಮಂಡಳಿಯ ಪರೀಕ್ಷಾ ವಿಭಾಗದಿಂದ ಕರೆ ಮಾಡುತ್ತಿರುವುದಾಗಿ ಹೇಳಿಕೊಂಡಿದ್ದರು. ಮಾ.31ರಂದು ನಡೆಯುವ ಬಯೋಲಜಿ ಪ್ರಶ್ನೆ ಪತ್ರಿಕೆ ಬಯಲಾಗಿದ್ದು, ಉಳಿದ ಇಂಗ್ಲೀಷ್, ವಿಜ್ಞಾನ ವಿಭಾಗದ ಪ್ರಶ್ನೆ ಪತ್ರಿಕೆ ಕೂಡ ಬಯಲಾಗಿದೆ. ನಿಮ್ಮಲ್ಲಿ ಇರಿಸಲಾದ ಪ್ರಶ್ನೆ ಪತ್ರಿಕೆಗಳನ್ನು ಪರಿಶೀಲನೆ ಮಾಡುವ ಬಗ್ಗೆ ನನ್ನ ವಾಟ್ಸಾಪ್ಗೆ ಕಳುಹಿಸಿ ಎಂದು ತಿಳಿಸಿದರು.
ಕರೆ ಮಾಡಿದ ವ್ಯಕ್ತಿಯ ಹೆಸರು ವಿಚಾರಿಸುವಾಗ ಆಕೆ, ತನ್ನ ಹೆಸರನ್ನು ಹೇಳದೆ ಫೋನ್ ಕರೆಯನ್ನು ಕಟ್ ಮಾಡಿದ್ದರೆಂದು ದೂರಲಾಗಿದೆ. ಅನುಮಾನಗೊಂಡ ಪ್ರಾಂಶುಪಾಲರು ಯಾರೋ ಮಹಿಳೆ ಪಿ.ಯು. ಮಂಡಳಿಯವರು ಎಂದು ಸುಳ್ಳು ಹೇಳಿ ಹುಸಿ ಕರೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ ಬಳಿಕ ದೂರು ದಾಖಲಿಸಿದ್ದಾರೆ.