ಮಂಗಳೂರು : ಮಂಗಳೂರು ಬೆಂಗಳೂರು ನಡುವಿನ ರೈಲು ಪ್ರಯಾಣ ಅಂದ್ರೆ ಅದೊಂದು ಮರೆಯಲಾಗದ ಅನುಭವ. ಅದರಲ್ಲೂ ಸಕಲೇಶಪುರದ ನಂತರದ ಪ್ರಯಾಣ ಎಂತವರ ಮನಸ್ಸಿಗೆ ಒಂದು ರಿಲ್ಯಾಕ್ಸೇಷನ್ ಕೊಡೋದಂತೂ ಸುಳ್ಳಲ್ಲ. ಬೆಟ್ಟ ಗುಡ್ಡಗಳ ಮಧ್ಯೆ ಗುಹೆಗಳನ್ನು ದಾಟುತ್ತಾ ರೈಲು ಸಾಗುತ್ತಿದ್ದರೆ ಸ್ವರ್ಗದಲ್ಲಿ ಎದ್ದೆವೇನೂ ಅನ್ನೋ ಅನುಭವ ನೀಡೋದಂತೂ ಸುಳ್ಳಲ್ಲ. ಅದರಲ್ಲೂ ಮಳೆಗಾಲದಲ್ಲಿ ಮಂಗಳೂರು ಬೆಂಗಳೂರು ಮಧ್ಯೆ ರೈಲು ಪ್ರಯಾಣ ಒಂದು ಪ್ರವಾಸದಂತೆ ಭಾಸವಾಗುತ್ತದೆ. ಎಷ್ಟೋ ಜನ ಮಳೆಗಾಲದಲ್ಲಿ ಇಲ್ಲಿನ ಪ್ರಕೃತಿ ಸೌಂದರ್ಯವನ್ನು ರೈಲಿನಲ್ಲಿ ಕೂತು ಅನುಭವಿಸಬೇಕು ಅನ್ನೋ ಕಾರಣಕ್ಕೆ ಬೆಂಗಳೂರಿನಿಂದ ಮಂಗಳೂರಿಗೆ ರೈಲು ಪ್ರಯಾಣ ಮಾಡುತ್ತಾರೆ. ಅಂತಹವರಿಗೆ ಈಗ ಅದ್ಭುತ ಉಡುಗೊರೆಯನ್ನು ಕೇಂದ್ರ ಸರ್ಕಾರ ನೀಡಿದೆ.
ಪಶ್ಚಿಮ ಘಟ್ಟವನ್ನು ಸೀಳಿಕೊಂಡು ಹೋಗುವ ಈ ರೈಲುಮಾರ್ಗದಲ್ಲಿ ಸಂಚರಿಸುವವರಿಗೆ ಶಿರಾಡಿ ಘಾಟಿಯ ಸೌಂದರ್ಯವನ್ನು ರೈಲಿನೊಳಗೆ ಕುಳಿತು ಸವಿಯುವ ಭಾಗ್ಯ ಸಿಗಲಿದೆ. ಮಾರ್ಗ ಮಧ್ಯದಲ್ಲಿ ಅರಣ್ಯ, ಜಲಪಾತ, ಸುರಂಗ, ಸೇತುವೆಗಳ ರಮಣೀಯ ನೋಟವನ್ನು ಪ್ರಯಾಣಿಕರು ಆಸ್ವಾದಿಸಬಹುದು. ಸದ್ಯ ಮಳೆಗಾಲ ಕೂಡ ಆರಂಭವಾಗಿರುವುದರಿಂದ ಪ್ರಯಾಣ ಅಹ್ಲಾದವನ್ನು ಉಂಟುಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಎತ್ತರದ ಪರ್ವತಗಳ ಅದ್ಭುತ ನೋಟ, ಕಣಿವೆಗಳು, ಆಳವಾದ ಕಮರಿಗಳು ಮತ್ತು ಹಚ್ಚ ಹಸಿರಿನ ಈ ಪ್ರದೇಶವು ಮಳೆಗಾಲದ ಸಂದರ್ಭದಲ್ಲಿ ಇನ್ನಷ್ಟು ಸುಂದರ ದೃಶ್ಯಾವಳಿಗಳು ನೋಡುಗರನ್ನು ಬೆರಗುಗೊಳಿಸುತ್ತದೆ.ರೈಲಿನಲ್ಲಿ ಎರಡು ವಿಸ್ಟಾಡೋಮ್ ಬೋಗಿಗಳಿದ್ದು, ಪ್ರತಿ ಬೋಗಿಯಲ್ಲಿ 44 ಆಸನ ಸಾಮರ್ಥ್ಯ ಇದೆ. ಅಗಲವಾದ, ದೊಡ್ಡ ಕಿಟಕಿಗಳು ಪ್ರಯಾಣಿಕರಿಗೆ ಸ್ಪಷ್ಟವಾದ ನೋಟವನ್ನು ನೀಡುತ್ತದೆ. ವಿಸ್ಟಾಡೋಮ್ ಬೋಗಿಗಳನ್ನು ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ ಎಲ್ಎಚ್ಪಿನಲ್ಲಿ (ಲಿಂಕೆ-ಹಾಫ್ಮನ್-ಬುಶ್ ಪ್ಲಾಟ್ಫಾರ್ಮ್ / ತಂತ್ರಜ್ಞಾನ) ತಯಾರಿಸಲಾಗಿದೆ. ಈ ಬೋಗಿಗಳು ಗಾಜಿನ ಮೇಲ್ಚಾವಣಿ ಹೊಂದಿದೆ.
ಬೋಗಿಯಲ್ಲಿ ಸಿಸಿಟಿವಿ ಕಣ್ಗಾವಲು, ಅಗ್ನಿಶಾಮಕ ಸುರಕ್ಷತಾ ವ್ಯವಸ್ಥೆಗಳು, ಎಲ್ಇಡಿ, ಓವನ್ ಮತ್ತು ರೆಫ್ರಿಜರೇಟರ್, ಮಿನಿ ಪ್ಯಾಂಟ್ರಿ, ಸ್ಟೀಲ್ ಲಗೇಜ್ ಕಪಾಟುಗಳು, ಪ್ರತಿ ಸೀಟಿನಲ್ಲಿ ಮೊಬೈಲ್ ಚಾರ್ಜಿಂಗ್ ಸಾಕೆಟ್ಗಳಿವೆ. ಕೋಚ್ ಸ್ವಯಂಚಾಲಿತ ಸ್ಲೈಡಿಂಗ್ ಬಾಗಿಲುಗಳು ಮತ್ತು ಜೈವಿಕ ಶೌಚಾಲಯಗಳನ್ನು ಹೊಂದಿದೆ. ಇನ್ನು ನಿನ್ನೆ ಮೊದಲ ಸಂಚಾರದಲ್ಲೇ ಪ್ರಯಾಣಿಸಿದ ಪ್ರಯಾಣಿಕರು ಪ್ರಯಾಣದ ಬಗ್ಗೆ ಎಲ್ಲರೂ ಖುಷಿ ವ್ಯಕ್ತಪಡಿಸಿದ್ದು, ಬಹುತೇಕ ಮಂದಿ ಇದೊಂದು ಅದ್ಭುತ ಅನುಭವ ಅಂದಿದ್ದಾರೆ. ಒಟ್ಟಿನಲ್ಲಿ ವಿಸ್ತಾಡೋಮ್ ಕೋಚ್ ಏರಿದ ಪ್ರತಿಯೊಬ್ಬ ಪ್ರಯಾಣಿಕನಿಗೆ ಈ ಪ್ರಯಾಣ ಮರೆಯಲಾಗರದ ಅನುಭವವಾಗಿ ಉಳಿಯೋದರಲ್ಲಿ ಎರಡು ಮಾತಿಲ್ಲ.