ಹಾಸನ : ಕೊಡಗು, ಹಾಸನ ಜಿಲ್ಲೆಗಳಲ್ಲಿ ಕಾಡಾನೆಗಳ ಹಾವಳಿ ಹೇಗಿರುತ್ತೆ ಅನ್ನೋದು ನಿಮಗೆಲ್ಲಾ ಗೊತ್ತೇ ಇರುತ್ತೆ. ಬೆಳೆ ಬೆಳೆಯೋದಕ್ಕಿಂತ ಕಷ್ಟ ಅವರಿಗೆ ಅವರು ಬೆಳೆದ ಬೆಳೆಗಳನ್ನು ಕಾಡಾನೆಗಳ ದಾಳಿಯಿಂದ ಸಂರಕ್ಷಿಸಿಕೊಳ್ಳೋದು. ಹಾಗಾಗಿ ಕಾಡಾನೆಗಳು ಅಂದ್ರೆ ಸಾಕು ಅಲ್ಲಿನ ಜನ ಹಿಡಿಶಾಪ ಹಾಕ್ತಾರೆ.
ಆದರೆ ಹಾಸನ ಜಿಲ್ಲೆಯ ಸಕಲೇಶಪುರದ ಮಳಲಿ ಗ್ರಾಮದ ಜನ ಇದೀಗ ಕಾಡಾನೆಯೊಂದನ್ನು ಕಂಡು ಅಯ್ಯೋ! ಎಂದು ಮರಗುತ್ತಿದ್ದಾರೆ. ಯೆಸ್… ಮಳಲಿಯ ಅನಿಲ್ ಎಂಬುವರ ಕಾಫಿ ತೋಟದಲ್ಲಿ ನಾಲ್ಕು ದಿನಗಳ ಹಿಂದಷ್ಟೇ ಜನಿಸಿದ ಆನೆಮರಿಯೊಂದು ಜನಿಸಿದೆ. ಯಾವುದೋ ಗುಂಡಿಗೆ ಸಿಲುಕಿ ಮರಿಯಾನೆಯ ಮುಂಗಾಲು ಮುರಿದಿದೆ. ಹಾಗಾಗಿ ಈ ಮುದ್ದು ಮರಿಗೆ ನಡೆಯೋದಕ್ಕೆ ಸಾಧ್ಯವಾಗುತ್ತಿಲ್ಲ. ತಾಯಾನೆ ನಿರಂತರವಾಗಿ ಮಗುವಿಗೆ ಹಾಲುಣಿಸೋದಕ್ಕೆ ಪ್ರಯತ್ನ ಮಾಡಿದೆ. ತನ್ನ ಮರಿಯನ್ನು ಎತ್ತಿ ನಿಲ್ಲಿಸಲು, ಹಾಲುಣಿಸಲು ಎರಡು ದಿನಗಳ ಕಾಲ ಯತ್ನಿಸಿದ್ದ ತಾಯಿ ಆನೆ ಯಾರನ್ನೂ ಸಮೀಪಕ್ಕೆ ಹೋಗಲು ಬಿಟ್ಟಿರಲಿಲ್ಲ. ಈ ವೇಳೆ ಗಜಪಡೆ ಕೂಡ ತಾಯಿ ಆನೆಗೆ ಸಾಥ್ ನೀಡಿದ್ದವು.
ಆದರೆ, ಇನ್ನು ಮರಿಯಾನೆ ಎದ್ದು ನಿಂತು ಹಾಲುಕುಡಿಯೋಕೆ ಆಗಲ್ಲ ಎಂಬ ನಿರ್ಧಾರಕ್ಕೆ ಬಂದ ತಾಯಿ ಆನೆ ಇಂದು ಬೆಳಗ್ಗೆ ಸ್ಥಳ ತೊರೆದಿದೆ. ತೋಟದಲ್ಲಿ ಅನಾಥವಾಗಿ ನರಳುತ್ತ ಬಿದ್ದಿರುವ ಮರಿಯಾನೆ ಆರೈಕೆ ಹೊಣೆಯನ್ನು ಅರಣ್ಯ ಇಲಾಖೆ ಹೊತ್ತುಕೊಂಡಿದೆ. ಪಶುವೈದ್ಯರು ಡ್ರಿಪ್ ಹಾಕಿ, ಬಾಟಲಿಯಲ್ಲಿ ಹಾಲು ಕುಡಿಸಿ ಆರೈಕೆ ಮಾಡುತ್ತಿದ್ದಾರೆ. ಮರಿಯಾನೆ ಮಾತ್ರ, ಕಾಲಿನ ನೋವಿನ ಜತೆಗೆ ತಾಯಿಗಾಗಿ ರೋಧಿಸುತ್ತಿದೆ. ಮರಿಯಾನೆಯ ಯಾತನೆಯನ್ನೂ ನೋಡಿದ ಸ್ಥಳೀಯರು ಕಣ್ಣೀರು ಹಾಕುತ್ತಿದ್ದಾರೆ. ತಾಯಿಯಿದ್ದೂ ಈಗ ಮರಿಯಾನೆ ಅನಾಥವಾದಂತಾಗಿದೆ.