ಗುಂಡ್ಯ : ರಸ್ತೆಯಲ್ಲಿ ಹೋಗುತ್ತಿದ್ದ ತಂದೆ -ಮಗನ ಮೇಲೆ ಒಂಟಿ ಸಲಗವೊಂದು ದಾಳಿ ನಡೆಸಿ ತಂದೆ ಚಿಕಿತ್ಸೆ ಫಲಿಸದೆ ಸಾವಪ್ಪಿ, ಮಗ ಗಾಯಗೊಂಡ ಘಟನೆ ಘಟನೆ ಡಿ.31ರಂದು ಸಂಜೆ ಶಿರಾಡಿಯಲ್ಲಿ ನಡೆದಿದೆ.ಕಡಬ ತಾಲೂಕಿನ ಶಿರಾಡಿ ಗ್ರಾಮದ ಜನತಾ ಕಾಲನಿ ನಿವಾಸಿಗಳಾದ ತಿಮ್ಮಪ್ಪ ( 45) ಮೃತ ದುರ್ದೈವಿ. ಅವರ ಮಗ ಶರಣ್ (18) ಗಾಯಗೊಂಡವರು..
ಶಿರಾಡಿ ಗ್ರಾಮದ ಜನತಾ ಕಾಲನಿ ನಿವಾಸಿಗಳಾದ ತಿಮ್ಮಪ್ಪ ಮತ್ತು ಅವರ ಪುತ್ರ ಶರಣ್ ಶನಿವಾರದಂದು ಗುಂಡ್ಯ ಹೊಳೆ ಬದಿಗೆ ತೆರಳಿದ್ದರು. ಈ ವೇಳೆ ಕಾಡಿನಿಂದ ಹೊಳೆಯತ್ತ ಆಗಮಿಸಿದ್ದ ಒಂಟಿ ಸಲಗವೊಂದು ಶರಣ್ ಮೇಲೆ ದಾಳಿ ಮಾಡಿದೆ. ಈ ವೇಳೆ ರಕ್ಷಣೆಗೆ ಮುಂದಾದ ತಿಮ್ಮಪ್ಪ ಅವರನ್ನೂ ಕೆಡವಿ ಕಾಲಿನಿಂದ ಒದ್ದು ಗಂಭೀರವಾಗಿ ಗಾಯಗೊಳಿಸಿದೆ. ಗಾಯಗೊಂಡ ತಿಮ್ಮಪ್ಪ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಶರಣ್ ಪ್ರಾಣಾಪಾಯದಿಂದ ಪಾರಾಗಿದ್ದು ನೆಲ್ಯಾಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.