ವಿಟ್ಲ: ನ್ಯಾಯಾಲಯದ ಆದೇಶದಂತೆ ಚುನಾವಣಾ ನೀತಿ ಸಂಹಿತೆ ಪ್ರಕಾರ ಕೋವಿ ಡೆಪಾಸಿಟ್ ಮಾಡಿದ್ದ ಹಿನ್ನೆಲೆಯಲ್ಲಿ ಅಳಿಕೆ ಗ್ರಾಮದ ಕೃಷಿಕರು ಕಾಡುಹಂದಿ, ಕೋತಿಗಳ ಉಪಟಳದಿಂದ ಕಂಗಾಲಾಗಿದ್ದಾರೆ.
ಕೃಷಿಕರಲ್ಲಿ ಓರ್ವವರಾದ ಅಳಿಕೆಯ ನಿಶಾಂತ ನಾರಾಯಣ ಎಂಬವರು ಮಂಗನ ಕಿರುಕುಳ ತಾಳಲಾರದೇ 112 ತುರ್ತು ಪೊಲೀಸರನ್ನೇ ಮಂಗಗಳನ್ನು ಓಡಿಸಲು ತೋಟಕ್ಕೆ ಬರಮಾಡಿಕೊಂಡ ವಿಚಿತ್ರ ಘಟನೆಯೊಂದು ಅಳಿಕೆ ಗ್ರಾಮದ ಬಿಲ್ಲಂಪದವು ಎಂಬಲ್ಲಿ ನಡೆದಿದೆ.
ಕೃಷಿಕ ನಿಶಾಂತ್ ಜಿಲ್ಲಾಧಿಕಾರಿಗೆ ಕರೆ ಮಾಡಿ ತಮ್ಮ ಸಮಸ್ಯೆಯನ್ನು ವಿವರಿಸಿದ್ದು, 112 ತುರ್ತು ಸಂಖ್ಯೆಗೆ ಕರೆಮಾಡುವಂತೆ ಜಿಲ್ಲಾಧಿಕಾರಿ ಸಲಹೆಯನ್ನು ನೀಡಿದ ಮೇರೆಗೆ ಬಳಿಕ 112 ತುರ್ತು ಸಂಖ್ಯೆಗೆ ಕರೆ ಮಾಡಿದರು. ಕಂಟ್ರೋಲ್ ರೂಂ ಅಧಿಕಾರಿಗಳ ಸೂಚನೆಯಂತೆ ನಿಶಾಂತ್ ರವರ ಮನೆ ಅಂಗಳಕ್ಕೆ 112 ಸಿಬ್ಬಂದಿಗಳು ಬಂದಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಸ್ವತಃ ಪೊಲೀಸರೇ ಕೋವಿಯನ್ನು ತಂದು ಒಪ್ಪಿಸಿರುವ ವಿದ್ಯಮಾನ ನಡೆದಿದ್ದು, ಈ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಫೊಟೋ ಸಹಿತ ಆಡಿಯೋ ವೈರಲ್ ಆಗಿದೆ.
ಘಟನೆಯ ಪೂರ್ಣ ವಿವರ:
ನ್ಯಾಯಾಲಯದ ಆದೇಶದಂತೆ ಕೋವಿಯನ್ನು ಹಿಂದಿರುಗಿಸದೆ, ನ್ಯಾಯಾಂಗ ನಿಂದನೆಯ ಆರೋಪ ಎದುರಿಸುತ್ತಿದ್ದ ಅಳಿಕೆಯ ನಿಶಾಂತನಾರಾಯಣ ಬಿಲ್ಲಂಪದವು ಎಂಬವರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.
ಏ.2ರಂದು ಜಿಲ್ಲಾಧಿಕಾರಿಗಳು ಕೋವಿ ಠೇವಣಾತಿಯಿಂದ ವಿನಾಯಿತಿಯನ್ನು ನೀಡಿರುವ ಮಾಹಿತಿಯನ್ನು ನಿಶಾಂತ ಅವರು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಏ.3ರಂದು ಕೋವಿಯನ್ನು ತಕ್ಷಣ ಹಿಂದಿರುಗಿಸಿ ನೀಡಬೇಕೆಂದು ನ್ಯಾಯಾಲಯ ದಿನದ ಆದೇಶದಲ್ಲಿ ಸೂಚನೆಯನ್ನು ನೀಡಿತ್ತು. ಆದರೆ, ತಾಳಿಪಡು ಬಿಲ್ಲಂಪದವು ಭಾಗದಲ್ಲಿ ಚಿರತೆ ಮರಿಗಳಿದ್ದು, ಕಪಿಲಾ ಗೋಸಂರಕ್ಷಣಾಕೇಂದ್ರದ ಗೋವುಗಳನ್ನು ಗುಡ್ಡಕ್ಕೆ ಬಿಡಲಾಗದ ಪರಿಸ್ಥಿತಿಯಿದೆ ಎಂದು ದೂರು ನೀಡಲು ಏ.3ರಂದು ವಿಟ್ಲ ಪೊಲೀಸ್ ಠಾಣೆಗೆ ಆಗಮಿಸಿದ್ದು, ಈ ಸಂದರ್ಭ ಸೂಚನೆ ನೀಡಲಾಗಿದ್ದರೂ ಪೊಲೀಸರು ಕೋವಿಯನ್ನು ಹಿಂದಿರುಗಿಸಿರುವುದಿಲ್ಲ, ಜಿಲ್ಲಾಧಿಕಾರಿಯವರು ಠೇವಣಾ ವತಿಯಿಂದ ವಿನಾಯಿತಿ ನೀಡಿದ ಆದೇಶದಲ್ಲಿರುವ ಷರತ್ತಿನ ಪ್ರಕಾರ ಕೋವಿಯನ್ನು ಮನೆಗೆ ತಂದು ಹಿಂದಿರುಗಿಸುವ ಕಾರ್ಯವನ್ನು ಮಾಡಬೇಕಾಗಿರುತ್ತದೆ. ಏ.1ಕ್ಕೆ ಕೋವಿ ಠೇವಣಿಗೆ ಕೊನೆಯ ದಿನವಾಗಿದ್ದರೂ, ಮಾ. 28ರಂದು ಪೊಲೀಸರು ಕರೆ ಮಾಡಿ ಕಿರುಕುಳ ನೀಡಿದ ಹಿನ್ನೆಲೆಯಲ್ಲಿ ಮಾ.29ರಂದು ಕೋವಿಯನ್ನು ಠೇವಣಿ ಇಟ್ಟಿರುತ್ತೇನೆ. ವಾರವಾದರೂ ನ್ಯಾಯಾಲಯ ಆದೇಶದಂತೆ ಕೋವಿಯನ್ನು ಹಿಂತಿರುಗಿಸಿರುವುದಿಲ್ಲ ಮತ್ತು ಆದೇಶ ಪಾಲನೆಯಾಗದೆ ನಿಂದನೆಯಾಗಿರುತ್ತದೆ. ಕಾಡು ಪ್ರಾಣಿಗಳಿಂದ ಆಗುತ್ತಿರುವ ನಷ್ಟವನ್ನು ತಾವೇ ಭರಿಸಬೇಕೆಂದು ಈ ತಿಳಿಸುತ್ತಿದ್ದೇನೆ ಎಂದು ನಿಶಾಂತ ಅವರು ನ್ಯಾಯಾಲಯದ ಮೊರೆ ಹೋಗಿದ್ದರು.