ಛಾಂಪಾಯ್: ಪ್ರಕೃತಿ ವಿಕೋಪಕ್ಕೆ ಈಶಾನ್ಯ ರಾಜ್ಯಗಳು ತತ್ತರಿಸಿ ಹೋಗುತ್ತಿದೆ. ಕಳೆದ ಮೂರು ದಿನಗಳಿಂದ ಮೇಲಿಂದ ಮೇಲೆ ಭೂಮಿ ಕಂಪಿಸುತ್ತಿರುವುದು ಜನರಲ್ಲಿ ಆತಂಕವನ್ನು ಹೆಚ್ಚಿಸುತ್ತಿದೆ. ಮೀಜೋರಾಂ ಮತ್ತು ನಾಗಾಲ್ಯಾಂಡ್ ನಲ್ಲಿ ಮತ್ತೊಮ್ಮೆ ಧರೆಯು ಕಂಪಿಸಿದೆ.
ಮೀಜೋರಾಂನಲ್ಲಿ ಮಧ್ಯರಾತ್ರಿ 1 ಗಂಟೆ 14 ನಿಮಿಷದ ಸಮಯದಲ್ಲಿ ಭೂಕಂಪನ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 4.5ರಷ್ಟು ತೀವ್ರತೆ ದಾಖಲಾಗಿದ್ದು, ಭೂಕಂಪನದ ಕೇಂದ್ರಬಿಂದು ದಕ್ಷಿಣ ಛಾಂಪಾಯ್ ನಿಂದ 21 ಕಿಲೋ ಮೀಟರ್ ದೂರದಲ್ಲಿದೆ ಎಂದು ಗುರುತಿಸಲಾಗಿದೆ.
ಮಿಜೋರಾಂ ಅಷ್ಟೇ ಅಲ್ಲದೇ ನಾಗಾಲ್ಯಾಂಡ್ ನ ವೊಖಾ ನಗರದಲ್ಲಿ ಇಂದು ಮುಂಜಾನೆ 3.03 ರ ಸುಮಾರಿಗೆ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 3.8 ರಷ್ಟು ತೀವ್ರತೆ ದಾಖಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಭಾರತದ ರಾಷ್ಟ್ರೀಯ ಭೂಗರ್ಭ ಇಲಾಖೆ, ವೊಖಾ ನಗರದಲ್ಲಿ ಗುರುವಾರ ಮುಂಜಾನೆ 3.03 ರ ಸುಮಾರಿಗೆ ಭೂಕಂಪವಾಗಿದ್ದು, ರಿಕ್ಟರ್ ಮಾಪಕದಲ್ಲಿ 3.8 ರಷ್ಟು ತೀವ್ರತೆ ದಾಖಲಾಗಿದೆ. ಭೂಕಂಪನದ ಕೇಂದ್ರ ಬಿಂದು ವೊಖಾದಿಂದ ಸುಮಾರು 9 ಕಿ.ಮೀ. ಆಳದಲ್ಲಿ ಉಂಟಾಗಿದೆ ಎಂದು ತಿಳಿಸಿದೆ.
ಮೀಜೋರಾಂನಲ್ಲಿ ನಾಲ್ಕನೇ ಬಾರಿ ಭೂಕಂಪನ ಸಂಭವಿಸಿರುವ ಬಗ್ಗೆ ವರದಿಯಾಗಿದೆ. ಇದಕ್ಕೂ ಮೊದಲು ಕಳೆದ 48 ಗಂಟೆಗಳಲ್ಲೇ ಮೂರು ಬಾರಿ ಮಿಜೋರಾಂನಲ್ಲೇ ಧರೆಯು ಕಂಪಿಸಿದ್ದು, ಜನರಲ್ಲಿ ಆತಂಕವನ್ನು ಹೆಚ್ಚಿಸಿತ್ತು.
ಕಳೆದ 48 ಗಂಟೆಗಳಲ್ಲಿ ಮೂರು ಬಾರಿ ಮಿಜೋರಾಂನಲ್ಲಿ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ 4.1 ತೀವ್ರತೆ ದಾಖಲಾಗಿದ್ದು, ಇದಕ್ಕೂ ಮೊದಲೇ ಎರಡು ಬಾರಿ ಭೂಕಂಪ ಸಂಭವಿಸಿತ್ತು. ಒಂದು 5.5 ತೀವ್ರತೆಯ ಭೂಕಂಪವಾಗಿದ್ದರೆ ಮಂಗಳವಾರ ಸಂಭವಿಸಿದ ಭೂಕಂಪದ ತೀವ್ರತೆ 3.7ರಷ್ಟಿತ್ತು.