ಬೆಂಗಳೂರು: , ಸ್ಯಾಂಡಲ್ವುಡ್ ಡ್ರಗ್ಸ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿ ಮೊನ್ನೆ ಸಿಸಿಬಿ ಅಧಿಕಾರಿಗಳ ಕೈಗೆ ತಗಲಾಕೊಂಡ ಆರೋಪಿ ಶ್ರೀ ಅಲಿಯಾಸ್ ಶ್ರೀನಿವಾಸ ಸುಬ್ರಮಣ್ಯನ್ ಧೈರ್ಯ ನೋಡಿ ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ.
ನಾವೆಲ್ಲಾ ದೈನಂದಿನ ಬಳಕೆಗಾಗಿ ಮನೆಯ ಟೆರೇಸ್ ನಲ್ಲೋ ಇಲ್ಲಾ ಮನೆ ಮುಂದೆನೋ ಕೊತ್ತಂಬರಿ ಸೊಪ್ಪು ಬೆಳೆಯುವಂತೆ ಈ ಆಸಾಮಿ ಗಾಂಜಾ ಬೆಳೆಸಿದ್ದಾನೆ. ಯೆಸ್.. ಮೊನ್ನೆ ಶ್ರೀ ಅಲಿಯಾಸ್ ಶ್ರೀನಿವಾಸ ಸುಬ್ರಮಣ್ಯನ್ ಮನೆ ಮೇಲೆ ದಾಳಿ ಮಾಡಿದ್ದ ಸಿಸಿಬಿ ಅಧಿಕಾರಿಗಳಿಗೆ ಆತನ ಮನೆಯಲ್ಲಿ ಗಾಂಜಾ ಗಿಡಗಳು ಸಿಕ್ಕಿದೆ. ದಾಳಿ ವೇಳೆ ಪರಿಶೀಲನೆ ನಡೆಸಿದ ಅಧಿಕಾರಿಗಳಿಗೆ ಮನೆಯಲ್ಲಿ ಎರಡು ಗಾಂಜಾ ಗಿಡಗಳು ಪತ್ತೆಯಾಗಿವೆ.
ಈ ಬಗ್ಗೆ ಶ್ರೀ ಅಲಿಯಾಸ್ ಶ್ರೀನಿವಾಸ ಸುಬ್ರಮಣ್ಯನ್ನ ಪ್ರಶ್ನಿಸಿದ್ದಕ್ಕೆ ತನ್ನ ವೈಯಕ್ತಿಕ ಬಳಕೆಗಾಗಿ ಗಾಂಜಾ ಗಿಡಗಳನ್ನು ನೆಟ್ಟಿದ್ದೆ ಎಂಬ ಸಬೂಬು ಹೇಳಿದ್ದಾನಂತೆ ಆಸಾಮಿ. ಅಂದ ಹಾಗೆ, ಶ್ರೀ ಕಷ್ಟಪಟ್ಟು ಬೆಳೆಸಿರುವ ಈ ಗಿಡಗಳು ಆರೋಪಿಯ ಪರಿಶ್ರಮದಿಂದ ಸುಮಾರು ಅರ್ಧ ಅಡಿಯಷ್ಟು ಎತ್ತರ ಬೆಳೆದುನಿಂತಿದೆ. ಶ್ರೀನಿವಾಸನ ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸದೆ ಇದ್ದಿದ್ದರೇ ಮುಂಬರುವ ದಿನಗಳಲ್ಲಿ ಇದನ್ನು ಹೆಮ್ಮರವಾಗಿ ಬೆಳೆಸುತ್ತಿದ್ದನೇನೋ!
ಇದಲ್ಲದೆ, ಈತನ ನಿವಾಸಲ್ಲಿ ಹಲವು ಮಾದರಿಯ ಮಾದಕ ವಸ್ತುಗಳು ಸಹ ಪತ್ತೆಯಾಗಿತ್ತು. 13 ಎಕ್ಸಟಸಿ ಮಾತ್ರೆಗಳು, 100 ಗ್ರಾಂ ಗಾಂಜಾ, 1.1 ಗ್ರಾಂ MDMA ಮತ್ತು 0.5 ಗ್ರಾಂ ಹಶೀಷ್ ಸಹ ಸಿಕ್ಕಿತ್ತು.