ವಾರಾಣಸಿಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ರಾಹುಲ್ ಗಾಂಧಿ ಅವರ 56ನೇ ಹುಟ್ಟುಹಬ್ಬವನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ.
ರಾಹುಲ್ ಗಾಂಧಿಯವರನ್ನು ಭಗವಾನ್ ಪರಶುರಾಮನಿಗೆ ಹೋಲಿಸಿ, ಒಂದು ಕೈಯಲ್ಲಿ ಕೊಡಲಿ ಹಾಗೂ ಮತ್ತೊಂದು ಕೈಯಲ್ಲಿ ಸಂವಿಧಾನ ಹಿಡಿದಿರುವ ಅವರ ದೊಡ್ಡ ಭಾವಚಿತ್ರಕ್ಕೆ ಗಂಗಾ ನದಿಯಲ್ಲಿ ವೇದಮಂತ್ರಗಳೊಂದಿಗೆ ಕ್ಷೀರಾಭಿಷೇಕ ಮಾಡಲಾಗಿದೆ. ಸಂವಿಧಾನ ವಿರೋಧಿ ಶಕ್ತಿಗಳ ವಿರುದ್ಧ ರಾಹುಲ್ ಹೋರಾಡುತ್ತಿರುವುದರಿಂದ ಈ ರೀತಿ ಬಿಂಬಿಸಲಾಗಿದೆ ಎಂದು ಯುವ ಕಾಂಗ್ರೆಸ್ ತಿಳಿಸಿದ್ದು, ಈ ಸಂದರ್ಭದಲ್ಲಿ 11 ಕೆಜಿ ಲಡ್ಡು ಕೇಕ್ ಕತ್ತರಿಸಲಾಗಿದೆ.
ಆದರೆ, ಕಾಂಗ್ರೆಸ್ನ ಈ ನಡೆಗೆ ಬಿಜೆಪಿ ನಾಯಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹಾಗೂ ಉತ್ತರ ಪ್ರದೇಶದ ಉಪಮುಖ್ಯಮಂತ್ರಿ ಬ್ರಜೇಶ್ ಪಾಠಕ್, “ರಾಹುಲ್ ಗಾಂಧಿಯವರನ್ನು ಪರಶುರಾಮನಿಗೆ ಹೋಲಿಸುವುದು ದೇವರಿಗೆ ಮಾಡುವ ಅಪಮಾನ ಮತ್ತು ಕಾಂಗ್ರೆಸ್ ವಿವೇಚನೆ ಕಳೆದುಕೊಂಡಿದೆ” ಎಂದು ಟೀಕಿಸಿದ್ದಾರೆ. ಆದರೆ ಯುಪಿ ಕಾಂಗ್ರೆಸ್ ಅಧ್ಯಕ್ಷ ಅಜಯ್ ರಾಯ್, ಕಾರ್ಯಕರ್ತರು ತಮ್ಮ ನಾಯಕನ ಮೇಲಿನ ಗೌರವದಿಂದ ಈ ಕೆಲಸ ಮಾಡಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.


