ಮಂಡ್ಯ: ನೀರು ನಮ್ಮ ಜೀವನಾಡಿ, ನೀರನ್ನು ಪೂಜಿಸಿ, ಸಂರಕ್ಷಿಸುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ರಾಜ್ಯಸಭಾ ಸದಸ್ಯರು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ತಿಳಿಸಿದ್ದಾರೆ.ಮಂಡ್ಯ ಜಿಲ್ಲಾಡಳಿತದ ವತಿಯಿಂದ ಇಂದು ಕೆ.ಆರ್. ಪೇಟೆ ತಾಲೂಕಿನ ತ್ರಿವೇಣಿ ಸಂಗಮದಲ್ಲಿ ಆಯೋಜಿಸಲಾಗಿದ್ದ ಮಹಾ ಕುಂಭಮೇಳವನ್ನು ಉದ್ಘಾಟಿಸಿ ಮಾತನಾಡಿದರು.
ಬಹಳಷ್ಟು ವಸ್ತುಗಳು ನಮ್ಮ ಜೀವನದಲ್ಲಿ ಸಹಕಾರಿಯಾಗಿರುತ್ತದೆ. ಆಯುಧ ಪೂಜೆಯಲ್ಲಿ ಆಯುಧಗಳು ಹಾಗೂ ಮನೆಯಲ್ಲಿ ಉಪಯೋಗಿಸುವ ವಸ್ತುಗಳಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ವೀರೇಂದ್ರ ಹೆಗ್ಗಡೆ ಹೇಳಿದರು.
ನೀರನ್ನು ಕೃಷಿ, ಕೈಗಾರಿಕೆ, ಪ್ರತಿನಿತ್ಯದ ಕೆಲಸಕ್ಕೆ ಬೇಕು. ಅನಾವೃಷ್ಠಿಯನ್ನು ಅನುಭವಿಸಿದ ಸಂದರ್ಭದಲ್ಲಿ ಪ್ರತಿ ಹನಿ ನೀರಿನ ಬೆಲೆ ತಿಳಿದಿದೆ. ಪ್ರತಿ ದಿನ ನಲ್ಲಿಯಲ್ಲಿ ಸದಾ ಸರಬರಾಜು ಆಗುತ್ತಿದ್ದ ನೀರು ನಿಗದಿತ ಸಮಯಕ್ಕೆ ಸೀಮಿತವಾಗುತ್ತಿದೆ. ಇದು ನೀರನ್ನು ಉಳಿಸಿ ಎಂದು ಪರಿಸರ ನಮಗೆ ನೀಡಿರುವ ಎಚ್ಚರಿಕೆ ಗಂಟೆ ಎಂದು ಡಾ. ಹೆಗ್ಗಡೆ ತಿಳಿಸಿದರು.
ಕೆ.ಆರ್. ಪೇಟೆಯಲ್ಲಿ ಕಾವೇರಿ, ಲಕ್ಷ್ಮಣ ತೀರ್ಥ ಹಾಗೂ ಹೇಮಾವತಿ ನದಿಗಳು ಸೇರಿ ತ್ರಿವೇಣಿ ಸಂಗಮವಾಗಿದೆ. ಇಲ್ಲಿ ನೀರನ್ನು ಪೂಜಿಸಿ, ಅರಾಧಿಸಲು ಕುಂಭ ಮೇಳ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಲ್ಲಿ ಪುಣ್ಯ ಸ್ನಾನ ಮಾಡಿ ಎಂದು ವೀರೇಂದ್ರ ಹೆಗ್ಗಡೆ ಸಲಹೆ ನೀಡಿದರು.