ಉಡುಪಿ : ಅಗತ್ಯ ವಸ್ತುಗಳ ಬೆಲೆ ಏರಿಕೆಯ ಮಧ್ಯೆಯೂ ಜಿಲ್ಲೆಯ ಜನ ದೀಪಾವಳಿ ಹಬ್ಬಕ್ಕಾಗಿ ಹೂ ಹಣ್ಣು, ತರಕಾರಿ, ಬಟ್ಟೆ ಖರೀದಿಯಲ್ಲಿ ತೊಡಗಿಸಿಕೊಂಡಿದ್ದಾರೆ.
ಹಬ್ಬಕ್ಕೆ ಹೂವು ಹಾಗೂ ತರಕಾರಿ ಬೆಲೆಯಲ್ಲಿ ಸ್ಪಲ್ಪ ಮಟ್ಟಿಗೆ ಏರಿಕೆಯಾಗಿದೆ. ಹಿಂದಿನ ಹಬ್ಬಗಳಿಗೆ ಹೋಲಿಕೆ ಮಾಡಿದರೆ ದೀಪಾವಳಿಗೆ ಹೂವು ಹಾಗೂ ತರಕಾರಿ ದರದಲ್ಲಿ ಸುಮಾರು 15ರಿಂದ 20ರೂ. ಏರಿಕೆಯಾಗಿದೆ. ನಗರದ ಕೆಎಂ ಮಾರ್ಗ, ರಥಬೀದಿ, ಮಣಿಪಾಲ, ವುಡ್ ಲ್ಯಾಂಡ್ ರೋಡ್ ಸೇರಿದಂತೆ ನಗರದ ವಿವಿಧ ರಸ್ತೆ ಬದಿಗಳಲ್ಲಿ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ನೂರಾರು ವ್ಯಾಪಾರಿಗಳು ಹೂವು ಮಾರಾಟ ಮಾಡುತ್ತಿದ್ದಾರೆ. ಒಂದು ಮಾರು ಸೇವಂತಿಗೆ 80 ರೂ., ಜೀನಿಯಾ 70 ರೂ., ಗೊಂಡೆ 80 ರೂ., ಬಿಳಿ ಸೇವಂತಿಗೆ 80ರೂ., ಗುಲಾಬಿ 100 ರೂ., ಮಾರಿಗೋಲ್ಡ್ 120 ರೂ.ಗೆ ಮಾರಾಟವಾದರೆ, ಒಂದು ಕೆಜಿ ಬೀನ್ಸ್ 60 ರೂ., ಬೆಂಡೆ 60 ರೂ., ಅಲಸಂಡೆ 60 ರೂ., ಟೊಮೆಟೋ 50 ರೂ., ಈರುಳ್ಳಿ 40 ರೂ., ಆಲೂಗಡ್ಡೆ 30 ರೂ., ಸೌತೆಕಾಯಿ 30 ರೂ., ಬದನೆಕಾಯಿ 80 ರೂ., ಕುಂಬಳಕಾಯಿ 30 ರೂ., ತೊಂಡೆಕಾಯಿ 60 ರೂ. ಇದೆ. ಸೇಬು 120ರೂ, ಕಿತ್ತಾಳೆ 60ರೂ., ಚಿಕ್ಕು 60 ರೂ., ಪೇರಲೆ 70, ದಾಳಿಂಬೆ 160, ಬಾಳೆ ಹಣ್ಣು 70 ರೂ.ಗೆ ಮಾರಾಟವಾಗುತ್ತಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.
ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಸುಡುವ ಬಿಸಿಲಿನ ವಾತಾವರಣ ಇದ್ದರೆ, ಮಧ್ಯಾಹ್ನದ ಬಳಿಕ ಮೋಡ ಕವಿದ ವಾತಾವರಣ ಕಂಡುಬಂತು. ಸಂಜೆ ವೇಳೆ ನಗರ ಸೇರಿದಂತೆ ವಿವಿಧ ಕಡೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಿದೆ. ಇದರಿಂದ ಹಬ್ಬದ ಖರೀದಿಗಾಗಿ ನಗರಕ್ಕೆ ಬಂದ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಯಿತು.
ಸರಕಾರ ಹಾಗೂ ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಜಿಲ್ಲೆಯಲ್ಲಿ ಹಸಿರು ಪಟಾಕಿ ಹೊರತು ಇತರೆ ಪಟಾಕಿಗಳ ಮಾರಾಟಕ್ಕೆ ಜಿಲ್ಲಾಡಳಿತ ಅನುಮತಿ ನೀಡಿಲ್ಲ. ಹೀಗಾಗಿ ಜಿಲ್ಲೆಯ ಹಲವೆಡೆ ಹಸಿರು ಪಟಾಕಿ ಮಳಿಗೆಗಳನ್ನು ತೆರೆಯಲಾಗಿದೆ.ಹಸಿರು ಪಟಾಕಿ ಬಿಟ್ಟು ಬೇರೆ ಪಟಾಕಿ ಮಾರಾಟ ಮಾಡಿದವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ತಿಳಿಸಿದ್ದಾರೆ.