ಮಂಗಳೂರು: ಮಳಲಿ ಮಸೀದಿಯಿಂದ ಹಿಡಿ ಮಣ್ಣನ್ನೂ ಕೊಡುವುದಿಲ್ಲ ಎಂಬ ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಹೇಳಿಕೆ ವಿಚಾರಕ್ಕೆ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಕಿಡಿಕಾರಿದ್ದಾರೆ.
ಬಿಜೆಪಿ ಮತ್ತು ಸಂಘ ಪರಿವಾರವನ್ನು ಎದುರಿಸಲಾಗದೇ ಕಾಂಗ್ರೆಸ್ ಎಸ್ ಡಿಪಿಐ ಮೂಲಕ ಹೇಳಿಕೆ ಕೊಡಿಸುತ್ತಿದೆ ಎಂದು ಹೇಳಿರುವ ಶಾಸಕ ಕಾಮತ್, ಮಳಲಿ ಮತ್ತು ಬೇರೆ ವಿಷಯದಲ್ಲಿ ಎಸ್ ಡಿಪಿಐ ಶಾಂತಿ ಕದಡುವ ಕೆಲಸ ಮಾಡುತ್ತಿದೆ, ಎಸ್ ಡಿಪಿಐ ಬೇರು ಬಿಟ್ಟು ಈ ರೀತಿ ಕೆಲಸ ಮಾಡಲು ಶಕ್ತಿ ತುಂಬಿದ್ದು ಕಾಂಗ್ರೆಸ್ ಎಂದು ಆರೋಪಿಸಿದ್ದಾರೆ.
ಸಿದ್ದರಾಮಯ್ಯ ಸರ್ಕಾರ ಎಸ್ ಡಿಪಿಐ ಮೇಲಿನ ಕೇಸ್ ವಾಪಾಸ್ ತೆಗೆದುಕೊಳ್ಳುವ ಮೂಲಕ ಕಾಂಗ್ರೆಸ್ ಅವರನ್ನು ಪರೋಕ್ಷವಾಗಿ ಬೆಳೆಸುವ ಕೆಲಸ ಮಾಡಿತ್ತು ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದ್ದಾರೆ.
ಮಂಗಳೂರಿನ ಜನ ಬುದ್ದಿವಂತರು, ಮಣ್ಣಿಗಾಗಿ ತ್ಯಾಗ ಮಾಡಿದವರು ಎಂದಿರುವ ವೇದವ್ಯಾಸ ಕಾಮತ್, ಎಸ್ ಡಿಪಿಐ ಕುತಂತ್ರ ಮಾಡಲು ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಬಿಡುವುದಿಲ್ಲ ಎಂದು ತಿಳಿಸಿದ್ದಾರೆ.
ಮಳಲಿ ವಿಷಯದಲ್ಲಿ ಏನೇ ಮಾಡಿದರೂ ಅಲ್ಲಿನ ಸಮಸ್ತ ಹಿಂದೂಗಳು ಇದ್ದಾರೆ. ಶಾಸಕ ಭರತ್ ಶೆಟ್ಟಿ ಮತ್ತು ಆರ್ ಎಸ್ ಎಸ್ ಒಟ್ಟಾಗಿ ಕುಳಿತು ಚಿಂತಿಸುತ್ತಾರೆ ಎಂದು ಹೇಳಿರುವ ಶಾಸಕ ವೇದವ್ಯಾಸ ಕಾಮತ್, ಆ ಪರಿಸರದ ಮುಸ್ಲಿಂ ಸಮಾಜದ ವ್ಯಕ್ತಿಗಳು ಒಂದೇ ಒಂದು ಮಾತನ್ನು ಹೇಳಿಲ್ಲ, ಆದರೆ ಎಸ್ ಡಿಪಿಐ ಎಲ್ಲೋ ಕುಳಿತುಕೊಂಡು ಅಲ್ಲಿನ ಜನರ ಮನಸ್ಸನ್ನು ಹಾಳು ಮಾಡುವ ಕೆಲಸ ಮಾಡ್ತಿದೆ ಎಂದು ಆರೋಪಿಸಿದ್ದಾರೆ.