ಕಡಬ ತಾಲೂಕಿನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಜಾತ್ರೆ ಮಹೋತ್ಸವದ ಪ್ರಯುಕ್ತ ಕ್ಷೇತ್ರದಲ್ಲಿ ವರ್ಷದಲ್ಲಿ ಒಮ್ಮೆ ಮಾತ್ರ ತೆಗೆಯುವ ಶ್ರೀಕ್ಷೇತ್ರದ ಪವಿತ್ರ ಮಹಾಪ್ರಸಾದ ಮೂಲ ಮೃತ್ತಿಕಾ ಪ್ರಸಾದ ಅಂದರೆ ಹುತ್ತದ ಮಣ್ಣನ್ನು ತೆಗೆಯಲಾಯಿತು.
ಕೊಪ್ಪರಿಗೆ ಏರುವ ಹಿಂದಿನ ಏಕಾದಶಿಯ ದಿನದಂದು ಶ್ರೀದೇವಳದ ಗರ್ಭಗುಡಿಯಿಂದ ದೇವಳದ ಪ್ರಧಾನ ಅರ್ಚಕರದ ವೇದಮೂರ್ತಿ ಸೀತಾರಾಮ ಎಡಪಡಿತ್ತಾಯ ವಿವಿಧ ವೈದಿಕ ವಿಧಿವಿಧಾನಗಳೊಂದಿಗೆ ಶುಭಮುಹೂರ್ತದಲ್ಲಿ ಮೂಲ ಪ್ರಸಾದವನ್ನು ತೆಗೆಯಲಾಯಿತು.
ಈ ಪ್ರಸಾದವನ್ನು ಹುತ್ತದಿಂದ ತೆಗೆಯುವುದಕ್ಕೂ ಒಂದು ಸಂಪ್ರದಾಯವಿದ್ದು , ಹಲವು ಧಾರ್ಮಿಕ ವಿಧಿ ವಿಧಾನಗಳಿವೆ. ಗರ್ಭಗುಡಿಯಲ್ಲಿರುವ ಹುತ್ತದೊಳಗಿನಿಂದ ಮೂರು ಹಿಡಿ ಮಣ್ಣು ತೆಗೆದು ಮತ್ತು ಕುಮಾರ ಪರ್ವತದ ತುದಿಯ ಮಣ್ಣನ್ನು ಸೇರಿಸಿ ಭಕ್ತರಿಗೆ ಪ್ರಸಾದ ರೂಪದಲ್ಲಿ ನೀಡಲಾಗುತ್ತದೆ.
ಈ ಪ್ರಸಾದವು ಕುಕ್ಕೆ ಸುಬ್ರಹ್ಮಣ್ಯ ದೇವಳದ ಗರ್ಭಗುಡಿಯಿಂದ ತೆಗೆಯುವ ಅತ್ಯಂತ ಪವಿತ್ರ ಮಹಾಪ್ರಸಾದ ಎಂಬ ನಂಬಿಕೆ ಇದೆ.
ಹಲವು ರೋಗಗಳಿಗೆ ರಾಮಬಾಣವಾಗಿದೆ, ಮೃತ್ತಿಕಾ ಪ್ರಸಾದದಿಂದ ನಾಗ ಭಯ ಕಾಡುವುದಿಲ್ಲ. ಕನಸಿನಲ್ಲಿ ಹಾವು ಬರುವ ಭಯ, ಸರ್ಪಗಳ ಭೀತಿ ದೂರವಾಗುತ್ತದೆ ಎಂಬ ನಂಬಿಕೆ. ಮಾತನಾಡಲು ತೊದಲುವವರು ಈ ಮಣ್ಣನ್ನು ನೀರಿನಲ್ಲಿ ಹಾಕಿ ಕುಡಿಯುತ್ತಿದ್ದರೆ ತೊದಲುವಿಕೆ ನಿವಾರಣೆಯಾಗುತ್ತದೆ. ಶುಭ ಸಂದರ್ಭಗಳಲ್ಲಿ ಒಳಿತಾಗುತ್ತದೆ.
ಚರ್ಮರೋಗಗಳ ಪರಿಹಾರಕ್ಕೆ ಉತ್ತಮ ಔಷಧಿ.
ಈ ಮೃತ್ತಿಕೆ ತೆಗೆದ ನಂತರ ಅಲ್ಲಿನ ಪುರೋಹಿತರು ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರು ಸದಸ್ಯರು ಅಧಿಕಾರಿಗಳು ಸಿಬ್ಬಂದಿಗೆ ಈ ಪ್ರಸಾದವನ್ನು ನೀಡಲಾಯಿತು