ಚಿಕ್ಕಮಗಳೂರು: ದೇವರಿಗೆ ಭಕ್ತರು ಬೇರೆ ಬೇರೆ ಹರಕೆ ಹೊರುವುದನ್ನು ನೀವೆಲ್ಲ ನೋಡಿರುತ್ತೀರಿ. ಆದರೆ ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿರುವ ಕಳಸೇಶ್ವರ ಸ್ವಾಮಿ ದೇವಸ್ಥಾನದಲ್ಲಿ ಪರಿವಾರ ದೇವರುಗಳ ಕಾಣಿಕೆ ಹುಂಡಿ ಎಣಿಕೆ ಕಾರ್ಯದ ವೇಳೆ ವಿಚಿತ್ರವಾದ ಪತ್ರವೊಂದು ಪತ್ತೆಯಾಗಿದೆ.
ಪತ್ರ ಓದಿದವರು ಸುಸ್ತಾಗಿ ಹೋಗಿದ್ದಾರೆ. ತಂದೆಯೊಬ್ಬರು ಮಗನ ಬಗ್ಗೆ ದೇವರಲ್ಲಿ ಪ್ರಾರ್ಥಿಸಿಕೊಂಡು ಪತ್ರ ಬರೆದಿದ್ದಾರೆ. ಪತ್ರದಲ್ಲಿ ನನ್ನ ಮಗನ ಹೆಸರು ಲಕ್ಷ್ಮಣ. ಅಶ್ವಿನಿ ನಕ್ಷತ್ರ ಮೇಷ ರಾಶಿ ಈತನಿಗೆ ಬೇಗ ಕೆಲಸ ಸಿಗುವಂತೆ ಮಾಡು ತಂದೆ, ಆತನ ನೆಚ್ಚಿನ ಕೆಲಸ ಸಿಗಲಿ, ಮತ್ತು ಆತನ ಕುಡಿತದ ಚಟ ಬಿಡಿಸು, ಅದರ ಮೇಲೆ ಮನಸ್ಸು ಬಾರದಂತೆ ಮಾಡು ತಂದೆ ಎಂದು ಪತ್ರದಲ್ಲಿ ಬರೆದಿದ್ದಾರೆ.
ಆತನ ಕೋಪ ಹೋಗಲಾಡಿಸು, ಚಂಚಲ ಸ್ವಭಾವ ಹೋಗಲಾಡಿಸು. ರಾತ್ರಿ ಹೊತ್ತು ನಿದ್ದೆ ಬರುವಂತೆ ಮಾಡು, ಭಯ ನಿವಾರಣೆ ಮಾಡಪ್ಪ, ಅವನ ಮನಸ್ಸಿಗೆ ಸುಖ, ಶಾಂತಿ ನೆಮ್ಮದಿ ನೀಡಪ್ಪ ಎಂದು ಬರೆದಿದ್ದಾರೆ. ಸಂಸಾರದಲ್ಲಿ ಜವಾಬ್ದಾರಿ ಕೊಡಪ್ಪ, ಹೆಂಡತಿ ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವಂತೆ ಮಾಡು ಹೀಗೆ ತನ್ನ ಹತ್ತಾರು ಬೇಡಿಕೆಗಳನ್ನು ಪತ್ರದಲ್ಲಿ ಬರೆದು ಕಾಣಿಕೆ ಹುಂಡಿಗೆ ಹಾಕಿದ್ದಾರೆ ಭಕ್ತರೊಬ್ಬರು. ಇದೀಗ ಈ ಪತ್ರ ವೈರಲ್ ಆಗಿದೆ.