ಸುರತ್ಕಲ್: ಸುರತ್ಕಲ್ ಅಕ್ರಮ ಟೋಲ್ ಗೇಟ್ ತೆರವಿಗೆ ಜೂನ್ 22 ರ ಅಂತಿಮ ಗಡುವು ನೀಡಿದ್ದು ತಿಂಗಳು ಕಳೆದಿದೆ. ಇದೀಗ ಆಗಸ್ಟ್ 15 ರೊಳಗೆ ಸುರತ್ಕಲ್ ಅಕ್ರಮ ಟೋಲ್ ತೆರವುಗೊಳಿಸಬೇಕೆಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಆಗ್ರಹಿಸಿದೆ.
ತೆರವಿಗೆ ಎಷ್ಟೇ ಹೋರಾಟ ಮಾಡಿದ್ರೂ ಸುರತ್ಕಲ್ ಟೋಲ್ ಗೇಟ್ ಅಕ್ರಮವಾಗಿ ಮುಂದುವರಿಯುತ್ತಿದೆ. ಇನ್ನು ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಭರತ್ ಶೆಟ್ಟಿ ಟೋಲ್ ಗೇಟ್ ತೆರವಿಗೆ ಹಲವು ಭರವಸೆಗಳನ್ನು ನೀಡುತ್ತಾ ಬಂದಿದ್ರೂ ಇನ್ನೂ ಈಡೇರಿಲ್ಲ..
ಇದೀಗ ಆಗಸ್ಟ್ ಹದಿನೈದು ಸ್ವಾತಂತ್ರ್ಯ ದಿನಾಚರಣೆಯ ಮುನ್ನವೇ ಸುರತ್ಕಲ್ ಅಕ್ರಮ ಟೋಲ್ ಗೇಟ್ ಮುಚ್ಚುವ ನಿರ್ಧಾರವನ್ನು ಜಾರಿಗೊಳಿಸಬೇಕು, ಆ ಮೂಲಕ ಟೋಲ್ ಲೂಟಿಯಿಂದ ಜನತೆಗೆ ಸ್ವಾತಂತ್ರ್ಯವನ್ನು ಕೊಡಿಸಬೇಕು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಘೇರಾವ್, ಸುಂಕ ಸಂಗ್ರಹಕ್ಕೆ ತಡೆ, ಟೋಲ್ ಗೇಟ್ ಮುಂಭಾಗ ಸಾವಿರಾರು ಜನರ ಸಾಮೂಹಿಕ ಧರಣಿಯಂತಹ ತೀವ್ರತರದ ಹೋರಾಟಗಳು ನಡೆಯಲಿವೆ ಎಂದು ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಎಚ್ಚರಿಸಿದ್ದಾರೆ.