ಕಾರ್ಕಳ : ಕಾರ್ಮಿಕ ಪರಿಷತ್ತಿನ ರಾಜ್ಯಾಧ್ಯಕ್ಷ ರವಿ ಶೆಟ್ಟಿ ಬೈಂದೂರು ಬೆಳ್ಮಣ್ ಪರಿಸರದ ಕ್ವಾರೇ ಮಾಲಕರೊಬ್ಬರಿಗೆ ರೂ.10 ಲಕ್ಷದ ಹಣದ ಬೇಡಿಕೆ ಮುಂದಿಟ್ಟಿರುವ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶ್ರೀದುರ್ಗಾ ಕ್ರಶರ್ನ ಮಾಲಕ ಬೆಳ್ಮಣ್ ಪೇರಲ್ಪಾದೆಯ ನಿತ್ಯಾನಂದ ಶೆಟ್ಟಿ ಈ ಕುರಿತು ಕಾರ್ಕಳ ಕಾರ್ಕಳ ಗ್ರಾಮಾಂತರ ಠಾಣೆಗೆ ದೂರು ನೀಡಿದವರು.
ಬೈಂದೂರಿನ ರವಿಶೆಟ್ಟಿ ಕಳೆದ 10 ವರ್ಷಗಳ ಹಿಂದೆ ನಿತ್ಯಾನಂದರವರ ಕ್ರಶರ್ಗೆ ಬಂದು ಜಲ್ಲಿ ತೆಗೆದುಕೊಂಡು ಹೋಗುತ್ತಿದ್ದ ಸಮಯದಲ್ಲಿ ಇವರಿಬ್ಬರ ಪರಿಚಯವಾಗಿತ್ತು. ಹೀಗಿರುವಾಗ ಸೆ. 10 ರಂದು ನಿತ್ಯಾನಂದ ಶೆಟ್ಟಿಗೆ ಕರೆ ಮಾಡಿದ್ದ ರವಿ ಶೆಟ್ಟಿ, ತಾನು ಪ್ರಸ್ತುತ ಕಾರ್ಮಿಕ ಪರಿಷತ್ತಿನ ರಾಜ್ಯಾಧ್ಯಕ್ಷನಾಗಿದ್ದು, ಮೌಖಿಕವಾಗಿ ಮಾತನಾಡಲಿದೆ ಎಂದು ಸಮಯವನ್ನು ಗೊತ್ತುಪಡಿಸಿದ್ದನು.
ಇದಾಗಿ ಅ. 26 ರಂದು ಬೆಳ್ಮಣ್ ಪೆಟ್ರೋಲ್ ಬಂಕ್ ಬಳಿ ಇದ್ದ ನಿತ್ಯಾನಂದ ಶೆಟ್ಟಿಗೆ, ರವಿ ಶೆಟ್ಟಿ ಬಂದು ನಿಮ್ಮ ಹಾಗೂ ನಿಮ್ಮ ಪಕ್ಕದಲ್ಲಿರುವ ಜೆ.ಎಲ್ ಕ್ರಶರ್ನ ಮಾಲಿಕ ಲ್ಯಾನ್ಸಿ ಡಿಕೋಸ್ತಾ ಸೇರಿ ಹತ್ತು ಲಕ್ಷ ಮೊತ್ತವನ್ನು ತನಗೆ ನೀಡಬೇಕು. ಇಲ್ಲವಾದರೆ ನಿಮ್ಮ ಕ್ರಶರನ್ನು ಮುಚ್ಚುವುದಾಗಿ ಬೆದರಿಸಿದ್ದನು ಎಂದು ಹೇಳಲಾಗಿದೆ.
ಅ. 30ರ ಬೆಳಿಗ್ಗೆ 11ಗಂಟೆಗೆ ನಿತ್ಯಾನಂದ ಶೆಟ್ಟಿ ಅವರ ಕ್ರಶರ್ನ ಪಕ್ಕದ ಕ್ರಶರ್ನ ರೆಟರ್ ಕರುಣಾಕರ ಶೆಟ್ಟಿ ಕರೆ ಮಾಡಿ, ಮೂವರು ಗಂಡಸರು ಹಾಗೂ ಮಹಿಳೆಯೊಬ್ಬರು ಇನ್ನೋವಾ ಕಾರಿನಲ್ಲಿ ನಿಮ್ಮ ಕ್ರಶರ್ನ ಬಳಿ ಬಂದು ಕ್ರಶರ್ನ ಹಾಗೂ ಪಾದೆಯ ಫೋಟೋ ತೆಗೆಯುತ್ತಿದ್ದಾರೆಂಬ ಮಾಹಿತಿಯನ್ನು ನೀಡಿದ್ದರು.
ಈ ಮಾಹಿತಿ ಮೇರೆಗೆ ನಿತ್ಯಾನಂದ ಶೆಟ್ಟಿ ಘಟನಾ ಸ್ಥಳಕ್ಕೆ ಧಾವಿಸಿದಾಗ ರವಿ ಶೆಟ್ಟಿ ಹಾಗೂ ಆತನ ಸಹಚರರು ಯಾವುದೋ ದುರುದ್ದೇಶ ಪೂರಕವಾಗಿ ಈ ಕೃತ್ಯ ನಡೆಸುತ್ತಿದ್ದಾರೆಂದು ಅವರಲ್ಲಿ ವಿಚಾರಿಸಿದಾಗ ಐದು ಲಕ್ಷ ರೂಪಾಯಿಗಳ ಬೇಡಿಕೆಯನ್ನು ಇಟ್ಟಿದ್ದಾರೆ. ಇಲ್ಲವಾದಲ್ಲಿ ಕ್ರಶರ್ ರನ್ನು ಮುಚ್ಚಿಸುವುದಾಗಿ ಬೆದರಿಕೆಯೊಡ್ಡಿದ್ದಾರೆ.
ಕ್ರಶರ್ಗೆ ಅತಿಕ್ರಮಿಸಿ, ಫೋಟೋಗಳನ್ನು ತೆಗೆದಿದ್ದಲ್ಲದೆ, ಐದು ಲಕ್ಷ ರೂಪಾಯಿ ಮೊತ್ತದ ಬೇಡಿಕೆಯನ್ನು ಮುಂದಿಟ್ಟ ಕಾರ್ಮಿಕ ಪರಿಷತ್ ರಾಜ್ಯಾಧ್ಯಕ್ಷ ರವಿಶೆಟ್ಟಿ ಬೈಂದೂರು ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಿತ್ಯಾನಂದ ಶೆಟ್ಟಿ ದೂರನ್ನು ನೀಡಿದ್ದಾರೆ. ಈ ಹಿನ್ನಲೆಯಲ್ಲಿ ಆರೋಪಿ ರವಿಶೆಟ್ಟಿ ಹಾಗೂ ಇತರ ನಾಲ್ವರ ವಿರುದ್ಧ ಕಾರ್ಕಳ ಠಾಣೆಯಲ್ಲಿ ಕೇಸು ದಾಖಲಾಗಿದೆ.