ಉಡುಪಿ: ರಾಜಧಾನಿ ಬೆಂಗಳೂರನ್ನು ಏಳು ಭಾಗಗಳಾಗಿ ವಿಭಜನೆ ಮಾಡಲು ಮುಂದಾಗಿರುವುದನ್ನು ಖಂಡಿಸಿ ಎ.26 ರಂದು ರಾಜ್ಯಾದ್ಯಂತ ಈಡುಗಾಯಿ ಒಡೆಯುವ ಚಳುವಳಿ ಹಮ್ಮಿಕೊಳ್ಳಲಾಗಿದ್ದು, ಇದು ಕನ್ನಡಿಗರ ಸಮಗ್ರ ಬೇಡಿಕೆಗಳ ಈಡೇರಿಕೆಯ ಆಗ್ರಹವಾಗಿದೆ ಎಂದು ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ತಿಳಿಸಿದರು.
ಅವರು ಉಡುಪಿಯಲ್ಲಿ ಎ.03 ಗುರುವಾರದಂದು ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ರಾಜ್ಯ ಸರಕಾರವು ಗ್ರೇಟರ್ ಬೆಂಗಳೂರು ಆಡಳಿತ ಮಸೂದೆ ಮೂಲಕ ರಾಜಧಾನಿ ಬೆಂಗಳೂರನ್ನು ಏಳು ಭಾಗಗಳಾಗಿ ವಿಭಜನೆ ಮಾಡಲು ಮುಂದಾಗಿದ್ದಾರೆ. ಕರಾವಳಿಗರು ಕನ್ನಡದ ಬಗೆಗಿನ ಹೋರಾಟದ ಬಗ್ಗೆ ಮತ್ತಷ್ಟು ಜಾಗ್ರತರಾಗಬೇಕು. ಕರಾವಳಿ ಭಾಗದಲ್ಲಿಯೂ ಮುಂದಿನ ದಿನದಲ್ಲಿ ವಿನೂತನ ಚಳುವಳಿ ಮಾಡಲಾಗುವುದು. ಕಾಸರಗೋಡು ಕನ್ನಡಿಗರಿಗಾಗಿ ಗಡಿಭಾಗ ಬಂದ್ ಮಾಡುವ ನಿಟ್ಟಿನಲ್ಲಿಯೂ ಮುಂದೆ ಚಳುವಳಿ ಮಾಡಲಾಗುವುದು,” ಎಂದರು.
ಕನ್ನಡಿಗರಿಗೆ ರಾಜ್ಯದಲ್ಲಿ ಉದ್ಯೋಗಾವಕಾಶ, ಮಹದಾಯಿ ಯೋಜನೆ, ಕಾಸರಗೋಡು ಕನ್ನಡ ಉಳಿಸುವ ಬೇಡಿಕೆ ಸಹಿತ ರಾಜ್ಯದ ಸಮಗ್ರ ಬೇಡಿಕೆಗಳನ್ನು ಈಡೇರಿಸುವ ಉದ್ದೇಶ ಈ ಚಳುವಳಿಯದ್ದು ಎಂದು ತಿಳಿಸಿದರು.