ಬೆಂಗಳೂರು: ರಾಜ್ಯ ಅಡಿಕೆ ಬೆಳೆಗಾರರ ಸಂಘದ ನಿಯೋಗ ಗೃಹ ಸಚಿವ ಆರಗ ಜ್ಞಾನೇಂದ್ರ ಅವರ ನೇತೃತ್ವದಲ್ಲಿ ನವದೆಹಲಿಯಲ್ಲಿ ನಿನ್ನೆ ಕೇಂದ್ರ ಸಚಿವರನ್ನು ಭೇಟಿ ಮಾಡಿದೆ.
ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ವಾಣಿಜ್ಯ ಸಚಿವ ಪಿಯೂಷ್ ಗೋಯಲ್, ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮತ್ತು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರನ್ನು ನಿಯೋಗ ಭೇಟಿ ಮಾಡಿದೆ.
ಅಡಿಕೆ ಬೆಳೆಗಾರ ಹಿತ ರಕ್ಷಣೆಗೆ ಅಮದಾಗುವ ಅಡಿಕೆ ಉತ್ಪನ್ನದ ಮೇಲೆ ನಿಯಂತ್ರಣ ಹೇರಬೇಕೆಂದು ನಿಯೋಗ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ಅಡಿಕೆ ಬೆಳೆಯ ನಿಗದಿತ ಉತ್ಪಾದನಾ ವೆಚ್ಚ ಹೆಚ್ಚು ಮಾಡಬೇಕು, ಆಮದು ಮೇಲಿನ ಸುಂಕ ಜಾಸ್ತಿ ಮಾಡಬೇಕು ಮತ್ತು ಅಡಿಕೆ ಮೇಲಿನ ಜಿಎಸ್ ಟಿ ದರದ ಬಗ್ಗೆಯೂ ನಿಯೋಗ ಕೇಂದ್ರ ಸಚಿವರ ಬಳಿ ಚರ್ಚಿಸಿ ಮನವಿ ಸಲ್ಲಿಸಿದೆ
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಡಿ.ಎನ್. ಜೀವರಾಜ್, ಸಾಗರ ಶಾಸಕ ಹರತಾಳು ಹಾಲಪ್ಪ, ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ಎಂಡಿ ಕೃಷ್ಣ ಕುಮಾರ್ ಮತ್ತು ನಿರ್ದೇಶಕ ಕೃಷ್ಣಪ್ರಸಾದ್ ಮಡ್ತಿಲ ನಿಯೋಗದಲ್ಲಿದ್ದರು.