ಕಡಬ: ಇಲ್ಲಿನ ಆಲಂಕಾರಿನಲ್ಲಿ ನಕಲಿ ಫೋನ್ ಪೇ ಬಳಸಿ ವರ್ತಕರಿಗೆ ವಂಚಿಸುತ್ತಿದ್ದ ಕಳ್ಳನೊಬ್ಬನನ್ನು ವರ್ತಕರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಆಲಂಕಾರಿನಲ್ಲಿ ಶನಿವಾರದಂದು ನಡೆದಿದೆ.
ವಂಚನೆಗೈದವನನ್ನು ತಾಲೂಕಿನ ಸವಣೂರು ಮಾಂತೂರು ನಿವಾಸಿ ಸಮೀರ್ (27) ಎಂದು ಗುರುತಿಸಲಾಗಿದೆ.
ಈತ ಅಂಗಡಿಗಳಿಗೆ ತೆರಳಿ ಸಾಮಗ್ರಿ, ಹಣ್ಣು ಹಂಪಲು ಹಾಗೂ ತನಗೆ ಇಂತಿಷ್ಟು ನಗದನ್ನು ನೀಡುವಂತೆ ತಾನು ಆ ನಗದನ್ನು ಹಾಗೂ ಸಾಮಾಗ್ರಿ ಮೊತ್ತವನ್ನು ಸೇರಿಸಿ ಫೋನ್ ಪೇ ಮಾಡುತ್ತೇನೆ ಎಂದು ಹಲವರು ವರ್ತರಿಗೆ ನಂಬಿಸಿ, ನಕಲಿ ಫೋನ್ ಪೇ ಮೂಲಕ ಹಣ ಪಾವತಿಸಿ ತಾನು ಬೇಡಿಕೆ ಇಟ್ಟಿರುವ ಮೊತ್ತವನ್ನು ಪಡೆದು ಜಾಗ ಖಾಲಿ ಮಾಡುತ್ತಿದ್ದ. ಹಲವಾರು ಭಾರಿ ಆತ ಬಹಳಷ್ಟು ವರ್ತಕರಿಗೆ ಈ ರೀತಿಯ ಮೋಸ ಮಾಡಿದ್ದು, ಶನಿವಾರ ಮಧ್ಯಾಹ್ನದ ವೇಳೆಯು ಅಂಗಡಿಯೊಂದಕ್ಕೆ ತೆರಳಿ ಹಣದ ಬೇಡಿಕೆ ಇಟ್ಟಿದ್ದಾನೆ. ಈ ವೇಳೆ ಆತನ ಸ್ವರ ಹಾಗೂ ಕೈಯಲ್ಲಿರುವ ಬ್ಯಾಂಡೇಜ್ ಮೂಲಕ ಅಂಗಡಿಯ ಕೆಲಸದ ಯುವಕ ಗುರುತು ಹಿಡಿದು ತನ್ನ ಮಾಲಕನಿಗೆ ಮಾಹಿತಿ ನೀಡಿದ್ದು, ಈ ಘಟನೆಯ ಬಗ್ಗೆ ತಿಳಿಯುತ್ತಿದ್ದಂತೆ ಸ್ಥಳದಲ್ಲಿದ್ದ ಜನ ಜಮಾಯಿಸಿ ವ್ಯಕ್ತಿಯನ್ನು ವಿಚಾರಿಸಿದಾಗ ವಂಚಿಸಿರುವುದನ್ನು ಒಪ್ಪಿಕೊಂಡಿದ್ದಾನೆ.
ಈ ಹಿನ್ನೆಲೆಯಲ್ಲಿ ಸಮೀರ್ ನನ್ನು ಪೊಲೀಸರಿಗೆ ಒಪ್ಪಿಸಲಾಯಿತು. ಅಷ್ಟೇಅಲ್ಲದೆ ಈತ ತನ್ನ ಸ್ಕೂಟರ್ಗೆ ನಕಲಿ ನಂಬರ್ಪ್ಲೇಟ್ ಅಳವಡಿಸಿರುವುದು ಪೊಲೀಸ್ ತನಿಖೆಯ ವೇಳೆ ಪತ್ತೆಯಾಗಿದೆ. ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.