ಬೆಂಗಳೂರು:ಕೇಂದ್ರ ಸರ್ಕಾರದ ಹೊಸ ಕೃಷಿ ಕಾನೂನುಗಳ ವಿರುದ್ಧ ದೆಹಲಿಯ ಹೊರವಲಯದಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರು ಡಿಸೆಂಬರ್ 8 ಮಂಗಳವಾರ ಅಂದ್ರೆ ನಾಳೆ ರಾಷ್ಟ್ರವ್ಯಾಪಿ ಕರೆ ನೀಡಿರುವ ಭಾರತ್ ಬಂದ್ ಗೆ ರಾಜ್ಯದಲ್ಲೂ ರೈತ ಸಂಘಟನೆಗಳು ಬೆಂಬಲ ನೀಡುವ ಸಾಧ್ಯತೆ ಇದೆ.
ಹೌದು. ಈ ಹಿನ್ನೆಲೆ ಡಿಸೆಂಬರ್ 5 ರ ಬಂದ್ ಬಳಿಕ ಕರ್ನಾಟಕದಲ್ಲಿ ಮತ್ತೊಂದು ಬಂದ್ ಬಿಸಿ ತಟ್ಟುವ ಸಾಧ್ಯತೆ ಇದೆ. ಡಿ.8 ರಂದು ಕರ್ನಾಟಕದಲ್ಲಿ ರಾಜ್ಯ ರೈತ ಸಂಘಟನೆಗಳು ಹೋರಾಟ ನಡೆಸಲಿದೆ. ಅಂದು ರೈತರು ರಾಜ್ಯದ ವಿವಿಧ ಜಿಲ್ಲೆಗಳ ಹೆದ್ದಾರಿಗಳನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಲಿದ್ದಾರೆ. ಈ ಹಿನ್ನೆಲೆ ರಾಜ್ಯದಲ್ಲಿ ಜನ ಸಂಚಾರಕ್ಕೆ ಬಂದ್ ಬಿಸಿ ತಟ್ಟಲಿದೆ ಎನ್ನಲಾಗುತ್ತಿದೆ.
ಡಿಸೆಂಬರ್ 8 ರಂದು ಭಾರತ್ ಬಂದ್ ಗೆ ರಾಜ್ಯ ರೈತ ಸಂಘದಿಂದಲೂ ಬಂದ್ ಸಕಲ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯಿಂದ ಭಾರತ್ ಬಂದ್ ಬೆಂಬಲ ನೀಡುತ್ತೇವೆ. ಡಿಸೆಂಬರ್ 9 ರಂದು ಬಾರಕೋಲು ಚಳುವಳಿ ನಡೆಸಿ ರಾಜ್ಯ ಬಂದ್ ಮಾಡಲಾಗುವುದು ಎಂದು ಹೇಳಿದ್ದಾರೆ.
ರಾಜ್ಯದ ಜಿಲ್ಲಾ ಹೆದ್ದಾರಿಗಳನ್ನು ಬಂದ್ ಮಾಡುತ್ತೇವೆ. ರಾಜ್ಯ ಸರ್ಕಾರ ಬಂದ್ ಗೆ ಅವಕಾಶ ನೀಡಬೇಕು. ಹಿಂಸಾತ್ಮಕ ಬಂದ್ ಮಾಡಲ್ಲ. ನಮ್ಮದು ಶಾಂತಿಯುತ ಬಂದ್. ರೈತರ ಬಂದ್ ಗೆ ಅವಕಾಶ ಕೊಡಬೇಕು ಎಂದು ಕೋಡಿಹಳ್ಳಿ ಚಂದ್ರಶೇಖರ್ ಅವರು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಗೆ ಮನವಿ ಮಾಡಿದ್ದಾರೆ.