ಉಡುಪಿ: ಬೆಂಗಳೂರು ಮೂಲದ ಭಕ್ತರ ಕುಟುಂಬಕ್ಕೆ ವ್ಯಕ್ತಿಯೊಬ್ಬ ಕೊಲ್ಲೂರು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯನೆಂದು ಹೇಳಿಕೊಂಡು, ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡುವುದಾಗಿ 30.73 ಲಕ್ಷ ರೂ. ಹಣ ಪಡೆದು ವಂಚಿಸಿದ ಘಟನೆ ನಡೆದಿದೆ.
ವಂಚನೆ ಎಸಗಿದ ವ್ಯಕ್ತಿ ಕೊಲ್ಲೂರು ನಿವಾಸಿ ಸುಧೀರ್ ಕುಮಾರ್. ಬೆಂಗಳೂರಿನ ದಿಲ್ಲಾ ಎನ್ನುವವರು ತನ್ನ ಗಂಡ ಮತ್ತು ಕುಟುಂಬ ಸದಸ್ಯರ ಜೊತೆಗೆ ಕೊಲ್ಲೂರು ದೇವಸ್ಥಾನಕ್ಕೆ ಭೇಟಿನೀಡಿದ್ದು, ಈ ವೇಳೆ ತನ್ನ ಅಣ್ಣನಿಗೆ ಪರಿಚಯವಿದ್ದ ಸುಧೀರ್ ಕುಮಾರ್ ಎಂಬಾತ ಪರಿಚಯವಾಗಿದ್ದ. ಆತ ತಾನು ಕೊಲ್ಲೂರು ದೇವಸ್ಥಾನದ ಆಡಳಿತ ಮಂಡಳಿ ಸದಸ್ಯನೆಂದು ನಂಬಿಸಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡುವುದಾಗಿ ಹೇಳಿ ಹಣ ಪಡೆದುಕೊಂಡಿದ್ದಾನೆ.
ಅಷ್ಟೇ ಅಲ್ಲದೆ, ದಿಲ್ಲಾ ಅವರ ತಾಯಿಗೆ ಸಂಬಂಧಿಸಿದ ಜಾಗದ ಖಾತೆ ಬದಲಾವಣೆ ಮಾಡಿಸುವುದಾಗಿ ಹೇಳಿ ದಿಲ್ಲಾ ಮತ್ತು ಅವರ ಅಣ್ಣ ದಿಲೀಶ್ ಅವರಿಂದ ಒಟ್ಟು 30,73,600 ರೂ.ಗಳನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ. ಖಾತೆ ಬದಲಾವಣೆಗಾಗಿ ತಾಯಿಯ ಸಹಿ ಹಾಕಿಕೊಡುವಂತೆ ಕೇಳಿದ್ದರಿಂದ ಸಂಶಯಗೊಂಡು ದೇವಸ್ಥಾನಕ್ಕೆ ಬಂದು ವಿಚಾರಿಸಿದಾಗ ಸುಧೀರ್ ಎನ್ನುವ ವ್ಯಕ್ತಿ ಆಡಳಿತ ಮಂಡಳಿಯ ಸದಸ್ಯನಲ್ಲವೆಂಬುದು ತಿಳಿದುಬಂದಿತ್ತು. ಇದರಿಂದ ದಿಲ್ಲಾ ಅವರು ಸುಧೀರ್ ಕುಮಾರ್ ವಿರುದ್ಧ ಹಣ ವಂಚನೆ ಮಾಡಿರುವ ಕುರಿತು ಕೊಲ್ಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎನ್ನಲಾಗಿದೆ.