ಬಾಗಲಕೋಟೆ: ಸೆಲೂನ್ವೊಂದರಲ್ಲಿ ಗೆಳೆಯರೊಂದಿಗೆ ಕುಳಿತು ಒಬ್ಬರಿಗೊಬ್ಬರು ಮಾತಿನ ಕುಚೇಷ್ಟೆಯಲ್ಲಿ ಕತ್ತರಿಯನ್ನು ಎದೆಗೆ ಇರಿದ ಪರಿಣಾಮ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದಲ್ಲಿ ನಡೆದಿದೆ. ರಬಕವಿ-ಬನಹಟ್ಟಿ ತಾಲೂಕಿನ ಆಸಂಗಿ ಗ್ರಾಮದ ಸಲೂನ್ ಅಂಗಡಿ ಮಾಲಿಕ ಸದಾಶಿವ ಅಣ್ಣಪ್ಪ ನಾವಿ(19) ಎಂಬಾತನೊಂದಿಗೆ ದಿನಂಪ್ರತಿ ಆತನ ಗೆಳೆಯರು ಸಲೂನ್ ಅಂಗಡಿಯಲ್ಲಿ ಕುಳಿತು ಹರಟೆ, ಕುಚೇಷ್ಟೆ ಮಾಡುವದು ಸಹಜವಾಗಿತ್ತು.
ವ್ಯಕ್ತಿಯೋರ್ವನ ಕಟಿಂಗ್ ಮಾಡುವ ಸಂದರ್ಭ ಆರೋಪಿ ಸದಾಶಿವನ ಗೆಳೆಯ ಸಾಗರ ಸೀನಪ್ಪ ಅವಟಿ(23) ಕುಚೇಷ್ಟೆ ಮಾಡುತ್ತಿದ್ದ. ಈ ವೇಳೆ ಕೈಯಲ್ಲಿದ್ದ ಕತ್ತರಿಯನ್ನೇ ಸದಾಶಿವ ಗೆಳೆಯನ ಎದೆಗೆ ಇರಿದ ಪರಿಣಾಮ ಹೃದಯಭಾಗಕ್ಕೆ ತೀವ್ರ ಗಾಯಗೊಂಡು ಅಲ್ಲಿಯೇ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ನಂತರ ರಬಕವಿ-ಬನಹಟ್ಟಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಆತ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿರುವುದಾಗಿ ತಿಳಿದು ಬಂದಿದೆ. ಈ ಕುರಿತು ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಲಾಗಿದ್ದ, ಜಮಖಂಡಿ ಡಿವೈಎಸ್ಪಿ ಪಾಂಡುರಂಗಯ್ಯ, ಸಿಪಿಐ ಜೆ.ಕರುಣೇಶಗೌಡ ಮತ್ತು ಪಿಎಸ್ಐ ಸುರೇಶ ಮಂಟೂರ ಹೆಚ್ಚಿನ ತನಿಖೆಯನ್ನು ಕೈಗೊಂಡಿದ್ದಾರೆ.