ಉಪ್ಪಿನಂಗಡಿ: ರಸ್ತೆ ಬದಿಯಲ್ಲಿ ಲಾರಿ ನಿಲ್ಲಿಸಿ ರಿಪೇರಿ ಕಾರ್ಯದಲ್ಲಿ ನಿರತರಾಗಿದ್ದ ಮೂವರಿಗೆ ಪಿಕಪ್ ಡಿಕ್ಕಿ ಹೊಡೆದು ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟು ಮತ್ತೊಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಉಪ್ಪಿನಂಗಡಿ ಸಮೀಪದ ಬಜತ್ತೂರು ಗ್ರಾಮದ ಬೆದ್ರೋಡಿ ಎಂಬಲ್ಲಿ ಇಂದು ಸಂಜೆ ನಡೆದಿದೆ.
ಬೆಂಗಳೂರಿನಿಂದ ಕಾರ್ಕಳಕ್ಕೆ ಗುಜುರಿ ತುಂಬಿಕೊಂಡು ಹೋಗುತ್ತಿದ್ದ 12 ಚಕ್ರದ ಲಾರಿ ಉಪ್ಪಿನಂಗಡಿ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬೆದ್ರೋಡಿಯಲ್ಲಿ ನಿನ್ನೆ ರಾತ್ರಿ ಕಿಟ್ಟು ನಿಂತಿತ್ತು. ಇದನ್ನು ಸರಿಪಡಿಸಲು ಬೆಂಗಳೂರಿನ ವಾಹನ ಚಾಲಕ ಸೇರಿ ನಾಲ್ಕು ಜನ ಮೆಕ್ಯಾನಿಕ್ ವಾಹನದ ಬಳಿ ಇಂದು ಬಂದಿದ್ದರು. ಲಾರಿ ರಸ್ತೆ ಬಿಟ್ಟು ಸೈಡಿನಲ್ಲಿ ನಿಂತಿತ್ತು ನಾಲ್ಕು ಮೆಕ್ಯಾನಿಕಲ್ ಗಳು ಲಾರಿ ರಿಪೇರಿ ಮಾಡುತ್ತಿದ್ದಾಗ ಇಂದು ಸಂಜೆ ಉಪ್ಪಿನಂಗಡಿಯಿಂದ ನೆಲ್ಯಾಡಿ ಕಡೆ ಹೋಗುತ್ತಿದ್ದ ಪಿಕಪ್ ವಾಹನವೊಂದು ಡಿಕ್ಕಿ ಹೊಡೆದು ಚಾಲಕ ಪರಾರಿಯಾಗಿದ್ದಾನೆ.

ಈ ವೇಳೆ ಬೆಂಗಳೂರು ಮೂಲದ ಮೆಕ್ಯಾನಿಕ್ ಗಳಾದ ಮಧು(35) , ರಹಮಾನ್(26) ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೊಬ್ಬ ಮೆಕ್ಯಾನಿಕ್ ಅಬ್ಝಲ್ ಗಂಭೀರ ಗಾಯಗೊಂಡಿದ್ದು ಅವನನ್ನು ಮಂಗಳೂರಿನ ವೆಲ್ಲಾಕ್ ಗೆ ಸೇರಿಸಲಾಗಿದೆ. ಮತ್ತೊಬ್ಬ ಮೆಕ್ಯಾನಿಕ್ ಡಿಕ್ಕಿ ವೇಳೆ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡಿದ್ದಾನೆ.

ಮಧ್ಯಾಹ್ನದಿಂದ ಬಿರುಸಾಗಿ ಸುರಿಯುತ್ತಿರುವ ಮಳೆಯಿಂದಾಗಿ ಪಿಕಪ್ ವಾಹನ ಚಾಲಕ ನಿಯಂತ್ರಣ ತಪ್ಪಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದಿರಬಹುದು ಎಂದು ಅಂದಾಜಿಸಲಾಗಿದೆ. ಪುತ್ತೂರು ಸಂಚಾರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಪರಾರಿಯಾದ ಪಿಕಪ್ ಚಾಲಕನಿಗಾಗಿ ಹುಡುಕಾಟ ನಡೆಯುತ್ತಿದೆ.