ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಇದೀಗ ಕೇರಳ-ಕರ್ನಾಟಕ ಗಡಿ ಬಂದ್ ಮಾಡಿದ್ದ ಮಾದರಿಯಲ್ಲಿಯೇ ಇಂದಿನಿಂದ ಮತ್ತೆ ಗಡಿ ಬಂದ್ ಮಾಡೋದಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಜಿಲ್ಲೆ ಪ್ರವೇಶಕ್ಕೆ ಇರುವ ಒಟ್ಟು ಗಡಿಗಳ ಪೈಕಿ 4 ಗಡಿಗಳಲ್ಲಿ ಕೊರೊನಾ ನೆಗೆಟಿವ್ ವರದಿ ಇದ್ದರಷ್ಟೇ ಪ್ರವೇಶಕ್ಕೆ ಜಿಲ್ಲಾಡಳಿತ ಅವಕಾಶ ಕೊಡುತ್ತಿದೆ.
ಇನ್ನು, ಕೇರಳದಿಂದ ಕರ್ನಾಟಕಕ್ಕೆ ಬರುವವರು “ಕೊರೊನಾ ನೆಗೆಟಿವ್’ ವರದಿ ತರುವುದು ಕಡ್ಡಾಯವಾಗಿದೆ. ಇದಕ್ಕಾಗಿ ಇಂದಿನಿಂದ ಚೆಕ್ಪೋಸ್ಟ್ ನಲ್ಲಿ ತಪಾಸಣೆ ನಡೆಯಲಿದೆ. ಇದೇ ಕಾರಣಕ್ಕೆ ಚೆಕ್ ಪೋಸ್ಟ್ ಗಳಲ್ಲಿ ಆರೋಗ್ಯ ಇಲಾಖೆಯ 2 ತಂಡಗಳು ಕಾರ್ಯನಿರ್ವಹಿಸಲಿವೆ. ಕೇರಳ ಭಾಗದಿಂದ ಉದ್ಯೋಗಕ್ಕೆಂದು ದ.ಕ. ಜಿಲ್ಲೆಗೆ ದಿನನಿತ್ಯ ಬಂದು ಹೋಗುವವರು ಪ್ರತಿ 15 ದಿನಗಳಿಗೊಮ್ಮೆ ಆರ್ಟಿಪಿಸಿಆರ್ ಪರೀಕ್ಷೆ ನಡೆಸಬೇಕು.
ಇಂದು ಬೆಳಗ್ಗೆ 8ರಿಂದ ಮಧ್ಯಾಹ್ನ 1 ಹಾಗೂ ಮಧ್ಯಾಹ್ನ 1ರಿಂದ ಸಂಜೆ 5ರ ವರೆಗೆ ಲ್ಯಾಬ್ ಟೆಕ್ನಿಶನ್, ಆರೋಗ್ಯ ಇಲಾಖೆ ಅಧಿಕಾರಿಗಳು ಕೇರಳದಿಂದ ಬರುವ ನೆಗೆಟಿವ್ ಪ್ರಮಾಣ ಪತ್ರ ಹೊಂದಿರದ ಪ್ರಯಾಣಿಕರಿಗೆ ರ್ಯಾಟ್, ಆರ್ಟಿ-ಪಿಸಿಆರ್ ಪರೀಕ್ಷೆ ನಡೆಸಲಿದ್ದಾರೆ.
ಅಂದ್ಹಾಗೆ ಕೇರಳದಿಂದ ಬಸ್ಗಳ ಮೂಲಕ ಪ್ರಯಾಣಿಸುವವರು 72 ಗಂಟೆಗಳ ಒಳಗೆ ನಡೆಸಲಾದ ಆರ್ಟಿಪಿಸಿಆರ್ ನೆಗೆಟಿವ್ ವರದಿ ಹೊಂದಿರುವ ಬಗ್ಗೆ ಖಚಿತಗೊಳಿಸಿದ ಬಳಿಕವೇ ಬಸ್ಗಳಲ್ಲಿ ಪ್ರಯಾಣಿಸಲು ಅನುವು ಮಾಡಲು ಆಯಾ ಬಸ್ಗಳ ನಿರ್ವಾಹಕರು ಕ್ರಮವಹಿಸಬೇಕೆಂದು ಜಿಲ್ಲಾಧಿಕಾರಿಗಳು ಈಗಾಗಲೇ ನಿರ್ದೇಶನ ನೀಡಿದ್ದಾರೆ.
ಕೆಲವು ಕಡೆಗಳಲ್ಲಿ ಕೊರೊನಾ ಆತಂಕ ಹೆಚ್ಚಾಗುತ್ತಿರುವ ಹಿನ್ನೆಲೆ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕೋವಿಡ್ ಪರೀಕ್ಷೆ ಮಾಡಿಸುವ ಕಾರ್ಯ ಇಂದಿನಿಂದ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಲಿದೆ.ಪ್ರಯಾಣಿಕರು ನೆಗೆಟಿವ್ ವರದಿಯನ್ನು ತಂದು ಬರಬೇಕು. ಜತೆಗೆ ಮಂಗಳೂರಿಗೆ ಬಂದ ಬಳಿಕ ಕೂಡ ಪರೀಕ್ಷೆ ನಡೆಸಬೇಕಿದೆ.