ಮಂಗಳೂರು: NHAI ಪ್ರಕಾರ, ಒಂದು ಟೋಲ್ ಗೇಟ್ ಇನ್ನೊಂದು ಟೋಲ್ ಗೇಟ್ನಿಂದ ಕನಿಷ್ಠ 60 ಕಿಮೀ ದೂರದಲ್ಲಿರಬೇಕು. ಆದರೆ, ಎನ್ ಐಟಿಕೆ ಟೋಲ್ ಗೇಟ್ ನಿಂದ ಸುರತ್ಕಲ್ ಗೆ ಇರುವ ಅಂತರ ಕೇವಲ 38 ಕಿ.ಮೀ.
ಹೆಜಮಾಡಿ-ತಲಪಾಡಿ ಹೆದ್ದಾರಿಯನ್ನು ನವಯುಗ್ ಅವರು ಬಿಒಟಿ (ಬಿಲ್ಟ್ ಆಪರೇಟಿಂಗ್ ಟ್ರಾನ್ಸ್ಫರ್) ಒಪ್ಪಂದದ ಅಡಿಯಲ್ಲಿ ನಿರ್ಮಿಸಿದ್ದಾರೆ. ಸುರತ್ಕಲ್ ಮತ್ತು ಬ್ರಹ್ಮರಕೂಟ್ಲು ಟೋಲ್ಗೇಟ್ ನಡುವಿನ ಅಂತರ ಕೇವಲ 30 ಕಿ.ಮೀ. ಎರಡೂ ಸ್ಥಳಗಳಲ್ಲಿ ಟೋಲ್ ಸಂಗ್ರಹಿಸಲಾಗಿದೆ.
ಸಾಮಾಜಿಕ ಕಾರ್ಯಕರ್ತ ದಿಲ್ರಾಜ್ ಆಳ್ವ ಅವರು ಸುರತ್ಕಲ್ ಟೋಲ್ ಗೇಟ್ ಕುರಿತು ಎನ್ಎಚ್ಎಐನಿಂದ ಮಾಹಿತಿ ಕೇಳಿದ್ದರು. ಎನ್ಎಚ್ಎಐ ನೀಡಿದ ಟೋಲ್ ಗೇಟ್ಗಳ ಪಟ್ಟಿಯಲ್ಲಿ ಸುರತ್ಕಲ್ ಹೆಸರೇ ಇಲ್ಲ ಎಂದು ತಿಳಿದು ಬೆಚ್ಚಿಬಿದ್ದರು! ಅಂದರೆ ಸುರತ್ಕಲ್ ಟೋಲ್ ಅಕ್ರಮವಾಗಿ ಕಾರ್ಯನಿರ್ವಹಿಸುತ್ತಿದೆ. ಇಲ್ಲಿ ನಿತ್ಯ ಲಕ್ಷಾಂತರ ರೂಪಾಯಿ ಸಂಗ್ರಹವಾಗುತ್ತದೆ.
ಹೆಜಮಾಡಿ ಟೋಲ್ ಗೇಟ್ ಆರಂಭವಾದಾಗ ಅದನ್ನು ಮುಚ್ಚುವ ಒಪ್ಪಂದ ಮಾಡಿಕೊಂಡು ಸುರತ್ಕಲ್ ಟೋಲ್ ಗೇಟ್ ಆರಂಭಿಸಲಾಗಿತ್ತು. ಸುರತ್ಕಲ್ ಟೋಲ್ ಗೇಟ್ ಬಂದ್ ಮಾಡಿ ಹೆಜಮಾಡಿ ಟೋಲ್ ಗೇಟ್ ನೊಂದಿಗೆ ವಿಲೀನಗೊಳಿಸಲು ನಿರ್ಣಯ ಕೈಗೊಳ್ಳಲಾಯಿತು. ಅದಕ್ಕೆ ರಾಜ್ಯ ಸರ್ಕಾರವೂ ಒಪ್ಪಿಗೆ ನೀಡಿದೆ. ಆದರೆ, ಮೂರು ವರ್ಷ ಕಳೆದರೂ ಟೋಲ್ ಸಂಗ್ರಹ ಅವ್ಯಾಹತವಾಗಿ ನಡೆಯುತ್ತಿದೆ.
ಸುರತ್ಕಲ್ ಟೋಲ್ ಗೇಟ್ ತೆರವು ಮಾಡುವಂತೆ ಪ್ರತಿಭಟನಾಕಾರರು ಆಗ್ರಹಿಸುತ್ತಿದ್ದಾರೆ. ಟೋಲ್ ಗೇಟ್ ಗೆ ಸೇರಿದ ರಸ್ತೆಯನ್ನು ಸರಿಯಾಗಿ ನಿರ್ವಹಣೆ ಮಾಡಬೇಕು. ಬೀದಿ ದೀಪ, ಕುಡಿಯುವ ನೀರು, ತಂಗುದಾಣಗಳ ವ್ಯವಸ್ಥೆ ಮಾಡಬೇಕು. ಆದರೆ, ಇದ್ಯಾವುದೂ ಜಾರಿಯಾಗಿಲ್ಲ.
ಸುರತ್ಕಲ್ ಟೋಲ್ ಗೇಟ್ ಶಾಶ್ವತವಾಗಿ ಬಂದ್ ಮಾಡುವಂತೆ ಸಾರ್ವಜನಿಕರು ಒಂದು ವರ್ಷದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೂ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಮೌನ ವಹಿಸಿದೆ. ಸಾಮಾಜಿಕ ಕಾರ್ಯಕರ್ತ ಆಸಿಫ್ ಕೂಡ ನ್ಯಾಯಕ್ಕಾಗಿ ವಿಶಿಷ್ಟ ಶೈಲಿಯಲ್ಲಿ ಪ್ರತಿಭಟನೆ ನಡೆಸಿ ಬಂಧನಕ್ಕೊಳಗಾಗಿದ್ದರು. ಇದು ಜಿಲ್ಲಾಡಳಿತಕ್ಕೆ ಕಂಟಕವಾಗಿ ಪರಿಣಮಿಸಿದೆ.
ಸುರತ್ಕಲ್ನಿಂದ ಬಂಟ್ವಾಳವರೆಗಿನ ಚತುಷ್ಪಥ ರಸ್ತೆಗೆ ತಗಲುವ ವೆಚ್ಚ ಮತ್ತು ಇಲ್ಲಿಯವರೆಗೆ ವಸೂಲಿ ಮಾಡಿರುವ ಟೋಲ್ಗೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ ದಿಲ್ರಾಜ್ ಆಳ್ವ ಅವರು ಎನ್ಎಚ್ಎಐನಿಂದ ಮಾಹಿತಿ ಕೇಳಿದ್ದರು. ಆದರೆ ಎನ್ಎಚ್ಎಐ ಮಂಗಳೂರು ವಿಭಾಗ ಯಾವುದೇ ಉತ್ತರ ನೀಡಿಲ್ಲ.