ಬೆಳ್ತಂಗಡಿ: ಸರ್ಕಾರಿ ಆಸ್ಪತ್ರೆಯಲ್ಲಿ ನೀರು ಶುದ್ಧೀಕರಣದ ಮೋಟರ್ ಕೈಕೊಟ್ಟ ಕಾರಣದಿಂದ ಡಯಾಲಿಸೀಸ್ ನಡೆಯದೇ ರೋಗಿಗಳು ಪರದಾಡಿದ ಘಟನೆ ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.
ಜೂನ್ 22 ರಂದು ಮಧ್ಯಾಹ್ನ ನಂತರ ಡಯಾಲೀಸಿಸ್ ಮಾಡಲು ನೀರು ಶುದ್ದಿಕರಣಗೊಳಿಸುವ ಮೋಟರ್ ಹಾಳಾಗಿದ್ದು ಡಯಾಲೀಸಿಸ್ ಮಾಡಲು ಸಮಸ್ಯೆ ಉಂಟಾಯಿತು. ನಿನ್ನೆ ಕೂಡ ಸರಿಯಾಗದೇ ಇದ್ದುದರಿಂದ ಯಾರಿಗೂ ಡಯಾಲೀಸಿಸ್ ಮಾಡಲು ಆಸಾಧ್ಯವಾಗಿದ್ದರಿಂದ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಡಯಾಲೀಸಿಸ್ ಗಾಗಿ ಬಂಟ್ವಾಳ ಹಾಗೂ ಉಜಿರೆ ಎಸ್. ಡಿ ಎಂ ಆಸ್ಪತ್ರೆಗಳಿಗೆ ತೆರಳಿದ್ದಾರೆ. ಕೆಲವರು ಕಾದು ಕುಳಿತಿದ್ದು ಅದಲ್ಲದೇ ಇಬ್ಬರು ರೋಗಿಗಳಿಗೆ ಡಯಾಲೀಸಿಸ್ ಮಾಡುವ ಸಂದರ್ಭ ವಾಂತಿಯಾಗಿದ್ದಲ್ಲದೇ ಆರೋಗ್ಯದಲ್ಲಿ ಏರು ಪೇರಾದ ಘಟನೆಯೂ ನಿನ್ನೆ ನಡೆದಿದೆ.ಈಗಾಗಲೇ ಮೋಟಾರ್ ಸರಿ ಪಡಿಸಲಾಗಿದ್ದು ಅದರ ಫಿಲ್ಟರ್ ಅಳವಡಿಸಲು ಬಾಕಿ ಇದೆ ಅದನ್ನು ಇಂದು ಸರಿಪಡಿಸಿ ಇಂದಿನಿಂದ ಮತ್ತೆ ಡಯಾಲೀಸಿಸ್ ಮಾಡಲಾಗುವುದು ಎಂಬ ಮಾಹಿತಿ ಆಸ್ಪತ್ರೆ ಮೂಲಗಳಿಂದ ತಿಳಿದು ಬಂದಿದೆ ಒಂದು ವೇಳೆ ಇಂದು ಕೂಡ ಡಯಾಲೀಸಿಸ್ ನಡೆಯದೇ ಇದ್ದಲ್ಲಿ ಎಲ್ಲಿ ಹೋಗುವುದು ಎಂಬ ಚಿಂತೆಯಲ್ಲಿ ರೋಗಿಗಳು ಇದ್ದಾರೆ.ಅದ್ದರಿಂದ ತಕ್ಷಣ ಸಮಸ್ಯೆ ಸರಿ ಪಡಿಸುವಂತೆ ಆಗ್ರಹಿಸಿದ್ದಾರೆ.