ಸುಳ್ಯ: ವಿದ್ಯಾರ್ಥಿಗಳಿಗಿನ ಕೋವಿಡ್ ಲಸಿಕೆ ವಿತರಣೆ ವ್ಯವಸ್ಥೆ ಲೋಪದೋಷಗಳನ್ನು ಸರಿಪಡಿಸಿ, ಹೆಚ್ಚು ಲಸಿಕೆಗಳನ್ನು ತರಿಸಿ ಹೆಚ್ಚಿನ ಲಸಿಕಾ ಕೇಂದ್ರಗಳಲ್ಲಿ ಮತ್ತು ಆಯಾಯ ಕಾಲೇಜುಗಳಲ್ಲಿ ಬೇಗನೆ ಲಸಿಕೆ ವಿತರಣೆಗೊಳ್ಳುವಂತೆ ಹಾಗೂ ಲಸಿಕೀಕರಣ ದಿನಾಂಕ ಮತ್ತು ಸಮಯದ ಬಗ್ಗೆ ಗೊಂದಲ ರಹಿತ ನಿರ್ದಿಷ್ಟ ಮಾಹಿತಿಯನ್ನು ಸಾಕಷ್ಟು ಮುಂಚಿತವಾಗಿ ನೀಡುವಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ಘಟಕ ವತಿಯಿಂದ ಮಾನ್ಯ ತಹಶಿಲ್ದಾರರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಕೇಂದ್ರ ಸರಕಾರದ ಯೋಜನೆಯಂತೆ ಸಾರ್ವಜನಿಕ ಸಮುದಾಯದ ಆರೋಗ್ಯಕ್ಕಾಗಿ ಉಚಿತವಾಗಿ ವಿತರಿಸುತ್ತಿರುವಂತಹ ಕೋವಿಡ್ ಲಸಿಕೆ ಇದೀಗ ಸುಳ್ಯ ತಾಲುಕಿನಾದ್ಯಂತ 18 ವರ್ಷ ಮೇಲ್ಪಟ್ಟ ಕಾಲೇಜು ವಿದ್ಯಾರ್ಥಿಗಳಿಗೆ ವಿತರಣೆ ಪ್ರಾರಂಭವಾಗಿದ್ದು, ವ್ಯಾಕ್ಸಿನ್ ಲಭ್ಯತೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಗೊಂದಲ ಉಂಟಾಗಿದೆ. ಈ ಮೊದಲು ಆಯಾಯ ಕಾಲೇಜು ಮಟ್ಟದಲ್ಲಿ ವಿತರಣೆಯಾಗುವುದೆಂದು ತಿಳಿಸಿದ್ದು, ನಂತರ ತಮ್ಮ ತಮ್ಮ ಊರಿನ ಸಮೀಪದ ಲಸಿಕಾ ಕೇಂದ್ರಗಳನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ. ಹಾಗೆಯೇ ನೊಂದಾವಣೆ ಮಾಡಿಕೊಳ್ಳುವ ಬಗ್ಗೆಯೂ ಗೊಂದಲವಿದೆ.
ವ್ಯಾಕ್ಸೀನ್ ತೆಗೆದುಕೊಳ್ಳಲು ಆದ್ಯತಾ ವಲಯಕ್ಕೆ ಕೊಡಮಾಡುವ ಅರ್ಜಿ ಪಡೆಯುವಲ್ಲಿ ವಿದ್ಯಾರ್ಥಿಗಳು ಅನಗತ್ಯವಾಗಿ ಕಾಲೇಜುಗಳಿಗೆ ಮತ್ತು ಲಸಿಕ ಕೇಂದ್ರಗಳಿಗೆ ಅಲೆದಾಡುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಲಸಿಕೆ ನೀಡುವಲ್ಲಿ ಆಧಾರ್ ಕಾರ್ಡ್ ಜೊತೆ ಕಾಲೇಜಿನ ಗುರುತು ಚೀಟಿಯನ್ನು ಆದ್ಯತಾ ಅರ್ಜಿಯಂತೆ ಪರಿಗಣಿಸಬೇಕಾಗಿ ಮತ್ತು ಆಯಾಯ ಕಾಲೇಜುಗಳಲ್ಲಿಯೇ ದಿನ ನಿಗದಿಪಡಿಸಿ ಲಸಿಕಾ ಶಿಬಿರ ಮಾಡಿ ವಿತರಿಸುವಂತೆ ತಿಳಿಸಲಾಯಿತು.
ಸುಳ್ಯ ಲಸಿಕಾ ಕೇಂದ್ರಗಳಿಗೆ ಸರಬರಾಜಾಗುತ್ತಿರುವ ಲಸಿಕೆಗಳ ಸಂಖ್ಯೆ ತೀರ ಕನಿಷ್ಠವಾಗಿದ್ದು, ವಿದ್ಯಾರ್ಥಿಗಳು ಮತ್ತು ಇತರ ಆಧ್ಯತಾ ವಲಯಗಳಲ್ಲಿನ ಫಲಾನುಭಾವಿಗಳು ಲಸಿಕಾ ಕೇಂದ್ರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದು ಹಿಂತಿರುಗಿ ಹೋಗುತ್ತಿರುವ ಪರಿಸ್ಥಿತಿ ಎದುರಾಗುತ್ತಿದೆ. ಈ ಕೋವಿಡ್ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮತ್ತು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದಲೂ ಇದನ್ನು ಗಂಭೀರವಾಗಿ ಪರಿಗಣಿಸಿ ಇಂದಿನಿಂದ ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ ಹಂಚುವ ಕಾರ್ಯ ಪ್ರಾರಂಭವಾಗಿರುವುದರಿಂದ, ಇನ್ನಷ್ಟು ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ತರಿಸಿಕೊಂಡು ಶೀಘ್ರವಾಗಿ ಎಲ್ಲಾ ವಿದ್ಯಾರ್ಥಿಗಳಿಗೆ ಲಸಿಕೆ ದೊರಕುವಂತೆ ಮಾಡಲು ಸೂಕ್ತ ಕ್ರಮಕ್ಕಾಗಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ವತಿಯಿಂದ ಆಗ್ರಹಿಸಲಾಯಿತು.
ಅಂತೆಯೇ ಲಸಿಕಾ ವಿತರಣೆಗಾಗಿ ಹೆಚ್ಚು ವಿತರಣಾ ಕೇಂದ್ರಗಳನ್ನು ಸ್ಥಾಪಿಸಿ ಎಲ್ಲಾ ಕಾಲೇಜುಗಳ ನೋಡಲ್ ಅಧಿಕಾರಿಯನ್ನು ಆಯಾಯ ವಿತರಣಾ ಕೇಂದ್ರದ ಜವಾಬ್ದಾರಿ ನೀಡಿ ಆಯಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಆದ್ಯತೆ ನೀಡಿ ಶೀಘ್ರವಾಗಿ ಲಸಿಕೆ ದೊರೆಯುಂತೆ ಮಾಡಲು ಈ ಸಂದರ್ಭದಲ್ಲಿ ವಿನಂತಿಸಲಾಯಿತು.
ಹಾಗೆಯೇ ಕೋವಿಡ್ ಲಸಿಕೆ ವಿತರಣಾ ವ್ಯವಸ್ಥೆ ಬಗ್ಗೆಯೂ ಸೂಕ್ತ ಮಾಹಿತಿಗಳು ಸೂಕ್ತ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತಲುಪದೇ ಇರುವುದರಿಂದ ತೊಂದರೆ ಆಗುತ್ತಿದ್ದು, ಅಗತ್ಯವಾಗಿ ನಿರ್ದಿಷ್ಟ ಸೂಚನೆಗಳನ್ನು ಸಾಕಷ್ಟು ಮುಂಚಿತವಾಗಿ ಮಾದ್ಯಮದ ಮೂಲಕ ತಿಳಿಸುವಂತೆ ಹಾಗೂ ವಿತರಣಾ ವ್ಯವಸ್ಥೆಯನ್ನು ಇನ್ನಷ್ಟು ಸ್ಪಷ್ಟಗೊಳಿಸಿಕೊಡುವಂತೆ ಸಂಬಂದಪಟ್ಟ ಅಧಿಕಾರಿ ವರ್ಗಗಳಿಗೆ ನಿರ್ದೇಶನ ನೀಡುವಂತೆ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸುಳ್ಯ ಘಟಕದ ಕಾರ್ಯಕರ್ತರು ಮನವಿ ಪತ್ರ ನೀಡಿ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಎಬಿವಿಪಿ ಸುಳ್ಯ ಘಟಕ ಅಧ್ಯಕ್ಷ ಕುಲದೀಪ್ ಪೆಲ್ತಡ್ಕ, ಸಾಮಾಜಿಕ ಜಾಲತಾಣ ಪ್ರಮುಖ ಅನಿಲ್ ಕುಮಾರ್, ವೃತ್ತಿ ಶಿಕ್ಷಣ ಪ್ರಮುಖ ವಿಪಿನ್, ರಂಜಿತ್ ಇನ್ನಿತರರು ಹಾಜರಿದ್ದರು.