ಪುತ್ತೂರು : ಗ್ರಾಮದ ಮೂಡಾಯಿ ತೋಟ ಸಂಪರ್ಕ ರಸ್ತೆಯ ಮಂಡೇಪುವಿನಲ್ಲಿ ಕೆಸರು ತುಂಬಿ ಸಂಚಾರ ಕಷ್ಟವಾಗಿರುವ ಹಿನ್ನೆಲೆಯಲ್ಲಿ 2ನೇ ತರಗತಿ ವಿದ್ಯಾರ್ಥಿಗಳಿಬ್ಬರು ಶಾಲಾರಂಭದ ಕಾರಣ ಸ್ವತಃ ಹಾರೆ ಹಿಡಿದು ದುರಸ್ತಿ ನಡೆಸಿದ ಸ್ಥಳಕ್ಕೆ ಸೋಮವಾರ ಸುಳ್ಯದ ಹಿರಿಯ ಸಿವಿಲ್ ನ್ಯಾಯಾಲಯ ನ್ಯಾಯಾಧೀಶ ಸೋಮಶೇಖರ್ ಅವರು ಎಪಿಪಿ ಮತ್ತು ಬೆಳ್ಳಾರೆ ಎಸ್ಐ ಜತೆಗೆ ಭೇಟಿ ನೀಡಿದರು.
ಸಂತೋಷ್ ಮತ್ತು ಕೇಶವ ಎಂಬುವರ ಮಕ್ಕಳಾದ 2ನೇ ತರಗತಿಯ ವಲ್ಲೀಶ ರಾಮ ಮತ್ತು ತನ್ವಿ ರಸ್ತೆ ದುರಸ್ತಿಗೆ ಪ್ರಯತ್ನಿಸಿದವರು.ರಸ್ತೆ ಪರಿಸ್ಥಿತಿಯನ್ನು ಅವಲೋಕಿಸಿದ ಅವರು, ವಿದ್ಯಾರ್ಥಿಗಳ ಕೈಯಲ್ಲಿ ಹಾರೆ ನೀಡಿದ್ದಕ್ಕಾಗಿ ಪೋಷಕರನ್ನು ಪ್ರಶ್ನಿಸಿದ್ದಾರೆ, ‘ಇದು ನಮ್ಮದೇ ರಸ್ತೆಯಾಗಿರುವುದರಿಂದ ಪಂಚಾಯತಿಗೆ ಮನವಿ ನೀಡಿದ್ದರೂ, ಅವರು ಮಾಡದಿದ್ದ ಕಾರಣದಿಂದಾಗಿ ನಾವು ಶ್ರಮದಾನ ಮಾಡಿದೆವು. ಆ ವೇಳೆ ಮಕ್ಕಳು ಬಂದು ಶ್ರಮದಾನದಲ್ಲಿ ಭಾಗಿಯಾಗಿದ್ದಾರೆ’ ಎಂದು ಪೋಷಕರು ತಿಳಿಸಿದರು ಎನ್ನಲಾಗಿದೆ.
ಮಕ್ಕಳಿಗೆ ಹಾರೆ ನೀಡಿ ಕೆಲಸ ಮಾಡಿಸಿದ ಪೋಷಕರ ಮೇಲೆ, ರಸ್ತೆ ದುರಸ್ತಿ ಮಾಡಿಸದ ಪಂಚಾಯತ್ ಸದಸ್ಯ, ಅಧ್ಯಕ್ಷ ಮತ್ತು ಪಿಡಿಒ ಮೇಲೆ ಹಾಗೂ ಮಕ್ಕಳ ಬಗ್ಗೆ ನಿಗಾ ವಹಿಸದ ಶಾಲಾ ಶಿಕ್ಷಕರ ಮೇಲೆ ಎಫ್ಐಆರ್ ದಾಖಲಿಸುವಂತೆ ಸೂಚಿಸಿದರು. ಬಳಿಕ ಎಸ್ಐ ಆಂಜನೇಯ ರೆಡ್ಡಿ ಅವರು ಪ್ರಕರಣ ದಾಖಲಿಸುವ ಬದಲು ರಸ್ತೆ ದುರಸ್ತಿ ಮಾಡೋಣ ಎಂದಾಗ ನ್ಯಾಯಾಧೀಶರು ಒಪ್ಪಿ ದುರಸ್ತಿಯ ಬಳಿಕ ವರದಿ ನೀಡುವಂತೆ ಸೂಚಿಸಿದರು.
ಪ್ರಕರಣ ದಾಖಲಿಸುವುದು ಬೇಡ. ರಸ್ತೆ ದುರಸ್ತಿ ಮಾಡಿಸೋಣ’ ಎಂದು ಸಬ್ ಇನ್ಸ್ಪೆಕ್ಟರ್ ಹೇಳಿದಾಗ, ಅದಕ್ಕೆ ಒಪ್ಪಿದ ನ್ಯಾಯಾಧೀಶರು, ‘ತಕ್ಷಣ ದುರಸ್ತಿ ಮಾಡಿ, ಅದರ ಚಿತ್ರ ಮತ್ತು ವರದಿ ಸಲ್ಲಿಸಬೇಕು’ ಎಂದು ನಿರ್ದೇಶನ ನೀಡಿದರು.