ನವದೆಹಲಿ: ಕೊರೊನಾ ನಿಯಂತ್ರಣಕ್ಕಾಗಿ ಲಾಕ್ಡೌನ್ ದೀರ್ಘಕಾಲೀನ ಪರಿಹಾರವಲ್ಲ ಹಿಂದಿನಿಂದಲೂ ವಾದಿಸುತ್ತಾ ಬಂದಿರುವ ಪ್ರೊಫೆಸರ್ ರೀಓಪನ್ ಎಂದೇ ಹೆಸರಾಗಿದ್ದಾರೆ. ಆಕ್ಸ್ಫರ್ಡ್ ವಿವಿ ಪ್ರಾಧ್ಯಾಪಕಿ, ಸಾಂಕ್ರಾಮಿಕ ರೋಗಗಳ ತಜ್ಞರಾದ ಭಾರತೀಯ ಮೂಲದ ಸುನೇತ್ರಾ ಗುಪ್ತಾ ಇದೀಗ ಅಚ್ಚರಿಯ ವಿಚಾರವೊಂದನ್ನು ಹೊರ ಹಾಕಿದ್ದಾರೆ.
ಅದೇನಪ್ಪಾ ಅಂದ್ರೆ, ಶೀತಜ್ವರ ಬಂದರೆ ನಾವು ಹೇಗೆ ಹೆದರಬೇಕಾಗಿಲ್ಲವೋ, ಅದೇ ರೀತಿ ಆರೋಗ್ಯವಂತರಾಗಿರುವ, ಯಾವುದೇ ಕಾಯಿಲೆಗಳಿಲ್ಲದ ವ್ಯಕ್ತಿಗಳು ಕೂಡ ಕೊರೊನಾಗೂ ಹೆದರಬೇಕಾಗಿಲ್ಲ. ನೆಗಡಿ, ಕೆಮ್ಮು, ಶೀತಜ್ವರದಷ್ಟೇ ಕೊರೊನಾ ಕೂಡ ಸಾಮಾನ್ಯ ಸಂಗತಿಯಾಗಲಿದೆ ಎಂದು ಹೇಳಿದ್ದಾರೆ ಸುನೇತ್ರಾ.
ಸದ್ಯ ಕಂಡು ಹಿಡಿಯಲಾಗುತ್ತಿರುವ ಲಸಿಕೆ ಯಶಸ್ವಿಯಾದರೂ ಅದನ್ನು ಕೊರೊನಾದಿಂದ ತೀವ್ರ ಅನಾರೋಗ್ಯಕ್ಕೆ ಒಳಗಾದವರ ಮೇಲೆ ಪ್ರಯೋಗಿಸಲಾಗುತ್ತದೆ. ಇನ್ನುಳಿದಂತೆ, ಹೆಚ್ಚಿನವರು ಈ ಕೊರೊನಾಗೆ ಹೆದರಬೇಕಾಗಿಲ್ಲ ಎನ್ನುವುದು ಅವರ ಅಭಿಪ್ರಾಯ. ಕೊರೊನಾ ಸಂಕಷ್ಟ ಸ್ವಾಭಾವಿಕವಾಗಿಯೇ ಕಡಿಮೆಯಾಗಲಿದೆ. ಮುಂದಿನ ದಿನಗಳಲ್ಲಿ ಶೀತಜ್ವರದಂತೆಯೇ ನಮ್ಮ ಬದುಕಿನ ಭಾಗವಾಗಲಿದೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.